Sunday, November 22, 2009

ಬಸವ ಜಯಂತಿಯ ದಿನ ಮೇಟಿ ಚಿಂತನೆಗಳು ಮೇಟಿ ಮಲ್ಲಿಕಾರ್ಜುನ

ಬಸವ ಜಯಂತಿಯ ದಿನ ಮೇಟಿ ಚಿಂತನೆಗಳು
ಮೇಟಿ ಮಲ್ಲಿಕಾರ್ಜುನ
ಸೋಮವಾರ, 27 ಏಪ್ರಿಲ್ 2009 (04:30 IST)
ಅನುಭವ ಮಂಟಪದಲ್ಲಿ ಬಸವಣ್ಣನವರ ತೈಲ ಚಿತ್ರ

ಹನ್ನೆರಡನೇ ಶತಮಾನದ ಸಾಮಾಜಿಕ-ರಾಜಕೀಯ ಕ್ರಾಂತಿಯ ಮುಂಚೂಣಿಯಲ್ಲಿದ್ದ ವೀರಶೈವ ಧರ್ಮದ ನೇತಾರ ಅಣ್ಣ ಬಸವಣ್ಣನನ್ನು ಬಸವ ಬಸವಣ್ಣ ಬಸವೇಶ್ವರ ಹಾಗೂ ವಿಶ್ವಗುರು ಬಸವೇಶ್ವರ ಜಗಜ್ಯೋತಿ ಬಸವೇಶ್ವರ ಎಂದು ಮುಂತಾಗಿ ನಮ್ಮ ಜನರು ಗ್ರಹಿಸಿಕೊಂಡಿದ್ದಾರೆ. ಈ ಸಂಭೋದನಾ ರೂಪಗಳು ಬಸವಣ್ಣನನ್ನು ವಿಭಿನ್ನವಾಗಿ ಪರಿಭಾವಿಸಿಕೊಂಡಿರುವುದರ ರೂಪಕಗಳಾಗಿವೆ. ಭಾಷಿಕ ರಚನೆಯ ನೆಲೆಗಳು ಸಾಮಾಜಿಕ ಹಾಗೂ ಲೋಕದೃಷ್ಟಿಯ ನೆಲೆಗಳಾಗಿರುತ್ತವೆ. ಭಾಷೆಯು ಸಂಸ್ಕೃತಿಯೊಂದಿಗೆ ತನ್ನ ನಂಟನ್ನಿಟ್ಟುಕೊಂಡಿರುತ್ತೆ. ಈ ಭಾಷಿಕ-ಸಾಂಸ್ಕೃತಿಕ ನೆಲೆಗಳ ನಡುವಿನ ನಂಟು ಸಾಮಾಜಿಕ-ಧಾರ್ಮಿಕ ಭಿನ್ನತೆಯ ನೆಲೆಗಳನ್ನು ಆಶ್ರಯಿಸಿಕೊಂಡಿರುತ್ತೆ. ಈ ನೆಲೆಗಳು ಸಾಂಸ್ಕೃತಿಕ ಅಸ್ಮಿತಿಯನ್ನೂ ಪ್ರತಿನಿಧಿಸುವ ಮಹತ್ತರದ ಸೂಚಕಗಳಾಗಿ ರೂಪಗೊಳ್ಳುತ್ತವೆ. ಇಂತಹದೇ ಪ್ರಕ್ರಿಯೆಯಿಂದ ಯಾವುದೇ ಚರಿತ್ರೆಯು ರೂಪಿಸಿಕೊಂಡಿದ್ದ ಹಾಗೂ ಅದನ್ನೆ ಅತೀ ಮುಖ್ಯ ತಿಳುವಳಿಕೆ ಎಂದು ನಂಬಿಕೊಂಡು ಸಾಂಸ್ಕೃತಿಕ ಬಿಕ್ಕಟ್ಟುಗಳಿಗೆ ಕಾರಣವಾಗಿದ್ದ ಸಾಕಷ್ಟು ನಿದರ್ಶನಗಳು ನಮ್ಮ ಇತಿಹಾಸದುದ್ದಕ್ಕೂ ಸಿಗುತ್ತವೆ. ವೈದಿಕ ಧರ್ಮವೂ ಹೀಗೆ ತನ್ನ ಧಾರ್ಮಿಕ ಪ್ರಾಬಲ್ಯವನ್ನು ಸ್ಥಾಪಿಸಿಕೊಂಡಿತ್ತು. ಇಂತಹ ವೈದಿಕ ಧರ್ಮದ ಸಾಮಾಜಿಕ-ಸಾಂಸ್ಕೃತಿಕ ತಿಳುವಳಿಕೆಯನ್ನು ಬುಡಮೇಲು ಮಾಡಿದ ಈ ಬಸವಣ್ಣ ಸಹಜವಾಗಿಯೇ ವಿಭಿನ್ನವಾಗಿ ಪರಿಚಿತನಾಗಿದ್ದಾರೆ. ಈ ಭಿನ್ನತೆಯ ನೆಲೆಗಳ ಆಂತರ್ಯದಲ್ಲಿರುವ ಉದ್ಧೇಶಗಳು ಮತ್ತು ಇವುಗಳು ಸೃಷ್ಟಿಸುವ ಅಪಾಯದ ಬಗ್ಗೆ ಯೋಚಿಸಬೇಕಾಗಿದೆ. ಇಂತಹ ಅಪಾಯಗಳನ್ನು ಸಾಂಸ್ಕೃತಿಕ ಧಾರ್ಮಿಕ ರೂಪಕಗಳನ್ನಾಗಿ ಗ್ರಹಿಸಿಕೊಂಡಿರುವ ಸಾಧ್ಯತೆಗಳಿವೆ. ಈ ರೂಪಕಗಳ ಬಳಕೆಯ ಹಿಂದಿನ ತಾತ್ವಿಕ ಮತ್ತು ಸಾಂಸ್ಕೃತಿಕ ಹೆಚ್ಚುಗಾರಿಕೆ ಏನು ಅನ್ನುವುದನ್ನು ಅರ್ಥೈಸಿಕೊಳ್ಳುವ ಪ್ರಯತ್ನ ಈ ಟಿಪ್ಪಣಿಯ ಉದ್ಧೇಶ.

ಸನಾತನ ಹಿಂದು ಧರ್ಮದ ಪರ್ಯಾಯ ಧಾರ್ಮಿಕ-ಸಾಮಾಜಿಕ ಚಳುವಳಿಯಾಗಿ, ಶೂದ್ರ ಮತ್ತು ದಲಿತತ್ವದ ಆಲೋಚನ ಕ್ರಮವಾಗಿ ಹಾಗೂ ಸಮಾಜದಂಚಿನಲ್ಲಿರುವ ಪ್ರತಿಯೊಬ್ಬರ ಅಸ್ತಿತ್ವವನ್ನು ಮೌಲ್ಯೀಕರಿಸುವ ಪ್ರಾಯೋಗಿಕ ಪಾಠಶಾಲೆಯಾಗಿ ವೀರಶೈವ ಧರ್ಮವು ಅವತರಿಸಿದ್ದರೂ, ಇಂದು ಈ ಚಳುವಳಿಯು ಆ ಸನಾತನ ಹಿಂದು ಧರ್ಮದ ಸಾತತ್ಯದ ಚಹರೆಗಳನ್ನು ಎತ್ತಿ ಹಿಡಿಯುವ ಒಂದು ಧಾರ್ಮಿಕ ಚಳುವಳಿಯಾಗಿಯೇ ಅರ್ಥೈಸಿಕೊಂಡಿರುವುದು ಚಾರಿತ್ರಿಕ-ಸಾಂಸ್ಕೃತಿಕ ವಿಪರ್ಯಾಸವೇ ಸರಿ. ಈ ರೂಪಾಂತರಕ್ಕೆ ಕಾರಣಗಳು ಇಲ್ಲವೇ ಇಲ್ಲ ಅನ್ನುವದನ್ನು ತಳ್ಳಿಹಾಕುವಂತಿಲ್ಲವಾದರೂ ಆ ಯಾವ ಕಾರಣವು ಇದರ ಪುನರ್ ಅಸ್ತಿತ್ವದ ಚಹರೆಗಳನ್ನು ಕಟ್ಟಿಕೊಡುವ ಇರಾದೆ ಉಳ್ಳದ್ದಲ್ಲ. ಈ ಸ್ಥಿತ್ಯಂತರದ ಹಿಂದಿನ ಪ್ರೇರಣೆ ಅಥವಾ ಕಾರಣಗಳನ್ನು ಮರುಶೋಧಿಸುವ ಅಗತ್ಯ ಇಲ್ಲ. ಆ ಎಲ್ಲ ಕಾರಣಗಳು ಸಾಮಾಜಿಕ-ರಾಜಕೀಯ ಪ್ರೇರಿತ ಹುನ್ನಾರಗಳು ಅನ್ನುವುದು ಕಣ್ಣಿಗೆ ರಾಚುವ ಸತ್ಯ. ಈ ಸತ್ಯ ಕೇವಲ ವೀರಶೈವ ಚಳುವಳಿಗೆ ಮಾತ್ರ ಅನ್ವಯಿಸಿದ್ದಲ್ಲ. ಇಂತಹ ರೂಪಾಂತರಗಳು ಇತಿಹಾಸದುದ್ದಕ್ಕೂ ಸಿಗುತ್ತವೆ. ಈ ಕಾರಣದಿಂದಲೇ ಪರ್ಯಾಯ ಸಾಮಾಜಿಕ-ಧಾರ್ಮಿಕ ಚಳುವಳಿಗಳ ಅಗತ್ಯ ಮತ್ತೆ ಮತ್ತೆ ಹುಟ್ಟುಕೊಳ್ಳುತ್ತದೆ. ಬಸವಣ್ಣನಿಗೆ ಸ್ಥಾಪಿತ ಜಾತಿ ಪದ್ಧತಿಯಿಂದ ಮುಕ್ತಿ ಪಡೆಯುವ ಮಾರ್ಗವಾಗಿಯೂ ಈ ವೀರಶೈವ ಆಂದೋಲನ ಹುಟ್ಟಿಕೊಂಡದ್ದು ಗಮನಾರ್ಹ. ಶೂದ್ರ ಮತ್ತು ದಲಿತರನ್ನು ಧಾರ್ಮಿಕ-ಸಾಮಾಜಿಕ ಮುನ್ನೆಲೆಗೆ ತರುವ ಪ್ರಯತ್ನದ ತಾತ್ವಿಕ ಹಿನ್ನಲೆ ಇವತ್ತು ಸಾಂಸ್ಕೃತಿಕ ವಿಘಟನೆಯನ್ನು ಸೃಷ್ಟಿಸಿದೆ. ವಿರಶೈವ ಧರ್ಮವು ಸಾಂಘಿಕ ಭದ್ರತೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಗಳನ್ನು ಮೈಗೂಡಿಸಿಕೊಂಡು ಸಮುದಾಯ ಪ್ರಜ್ಞೆಗೆ ಎಡೆಮಾಡಿಕೊಟ್ಟಿತ್ತು. ರಾಜಕೀಯ ಲಾಭ ಹಾಗೂ ಕೋಮು ಕಟುವಾದಿಗಳ ಏಕಪಕ್ಷೀಯ ನಿರ್ಧಾರಗಳು ಧರ್ಮನಿರಪೇಕ್ಷವಾದ ವೀರಶೈವ ಆಂದೋಲನವು ಇವತ್ತು ಕೋಮುವಾದಿಗಳೊಂದಿಗೆ ಕೈ ಜೋಡಿಸಿದೆ. ವ್ಯತಿರಿಕ್ತವಾಗಿ ಧಾರ್ಮಿಕ ಕ್ರಾಂತಿಯೆಂದರೆ ಕೋಮುವಾದೀಕರಣ ಎನ್ನುವ ತೀರ್ಮಾನದಲ್ಲಿದೆ. ಈ ಆಂದೋಲನವು ರೂಪಿಸಿಕೊಂಡಿದ್ದ ಕೆಲವು ಧಾರ್ಮಿಕ ಸಂಕೇತಗಳಾದ ಆತ್ಮಲಿಂಗ, ಜಂಗಮ, ಪ್ರಸಾದ ಮುಂತಾದವುಗಳು ಜಾತಿಯ ಲಾಂಛನಗಳಾಗಿ ಮಾರ್ಪಟ್ಟಿವೆ. ಸಂಕೇತ ಮತ್ತು ಲಾಂಚನಗಳ ನಡುವಿನ ಧಾರ್ಮಿಕ-ಸಾಂಸ್ಕೃತಿಕ ಸೂಕ್ಷ್ಮಗಳು ಗೋಚರಿಸದೆ ಹೋಗಿದ್ದು ದುರಂತವೇ ಸರಿ. ವಿಪರ್ಯಾಸ ನೋಡಿ ಶ್ರೇಣೀಕೃತ ನೂರಾರು ಒಳಪಂಗಡಗಳು ಈ ವೀರಶೈವ ಧರ್ಮದಲ್ಲಿ ಮರುಹುಟ್ಟು ಪಡದಿವೆ. ವರ್ಣಾಶ್ರಮದ ಅನಿಷ್ಠ-ನಿಶಿದ್ಧ ಆಚರಣೆಗಳನ್ನು ನಿರ್ನಾಮ ಮಾಡಿಬೇಕಿದ್ದ ಈ ಚಳುವಳಿಯೂ ಅಂತಹ ಒಂದು ಧರ್ಮದ ಮುಂದಾಳುತನದಲ್ಲಿ ತನ್ನ ಅಸ್ತಿತ್ವ ಮತ್ತು ಅಸ್ಮಿತಿಯನ್ನು ಗುರುತಿಸಿಕೊಳ್ಳಲು ಹೆಣಗುತ್ತಿರುವ ಈ ಧರ್ಮದ ತಾತ್ವಿಕತೆಯನ್ನು ಮರುಪ್ರಶ್ನಿಸುವ ಜರೂರಿದೆ. ಹಾಗೂ ಈ ಆಂದೋಲನದ ಮುಂದಾಳುತನ ವಹಿಸಿದ್ದ ಬಸವ, ಬಸವಣ್ಣ ಮತ್ತು ಬಸವೇಶ್ವರ ಎಂಬೀತ್ಯಾದಿ ಹೆಸರುಗಳಿಂದ ಗುರುತಿಸಿಕೊಂಡ ಇವರ ತತ್ವ-ಸಿದ್ಧಾಂತದ ಪರಿ ಏನು ಅನ್ನುವುದನ್ನು ಚರ್ಚಿಸಬೇಕಿದೆ.

ಬಸವಣ್ಣನ ಒಂದು ವಚನಬಸವಣ್ಣ ವೇದ ಮತ್ತು ವೈದಿಕ ಧರ್ಮದ ಆಚರಣೆಗಳನ್ನು ದಿಕ್ಕರಿಸಿ ವೀರಶೈವ ಎನ್ನುವ ಜೀವಪರ ಧರ್ಮದ ಹುಟ್ಟಿಗೆ ಕಾರಣ ಕರ್ತನಾದರು. ಈ ಆಂದೋಲನವು ತಮ್ಮ ವೃತ್ತಿ ಮತ್ತು ಅಸ್ತಿತ್ವದ ವೈವಿಧ್ಯತೆಯ ಚಹರೆಗಳನ್ನು ಹಾಗೇ ಉಳಿಸಿಕೊಂಡು ಅವುಗಳನ್ನು ನಿರಾಕಾರಿ ಮತ್ತು ಅಮೂರ್ತಸ್ವರೂಪದ ಸಂಕೇತವಾದ ಆತ್ಮಲಿಂಗವನ್ನು ಸೃಷ್ಟಿಸುವುದರ ಮುಖೇನ ಸಮಾನತೆಯ ಅಂತರ್‌ಬೆಸುಗೆಯನ್ನು ಹಾಕಿದರು. ಲಿಂಗವು ಸಾಮಾಜಿಕ-ಧಾರ್ಮಿಕ ಅಸಮತೋಲನವನ್ನು ನಾಶಮಾಡಿ ಸಾಂಸ್ಕೃತಿಕ ಐಕ್ಯತೆಯನ್ನು ಸಾಧಿಸುವುದರ ರೂಪಕವಾಗಿ ಪ್ರತಿನಿಧಿಸುತ್ತೆ. ಇಂತಹ ಸಂಬಂಧಗಳು ಗಟ್ಟಿಗೊಳ್ಳಲು ಅಂತರ್‌ಜಾತೀಯ ಮದುವೆಗಳನ್ನು ಉತ್ತೇಜಿಸಿದರು. ಸಾಮಾಜಿಕ ಸಮಾನತೆಯ ನೆಲೆಗಳನ್ನು ಅಂತರಂಗ ಬಹಿರಂಗದ ಶುದ್ಧತೆಯ ಆಯಾಮಗಳಲ್ಲಿ ಕಂಡುಕೊಂಡಿರುವುದು ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಇಂತಹ ಸಾಂಸ್ಕೃತಿಕ ಆಯಾಮಗಳಿಗೆ ಮಹತ್ವ ನೀಡಿರುವುದು ಗಮನಾರ್ಹ. ಸಾಮಾಜಿಕ-ಧಾರ್ಮಿಕ ಪರಿವರ್ತನೆ ಮತ್ತು ಸುಧಾಹರಣೆಗಳ ಸ್ಪಷ್ಟ ನೆಲೆಗಳನ್ನು ಮಾನವತವಾದಿ ಲಕ್ಷಣಗಳಾಗಿ ನಮ್ಮ ಚರಿತ್ರೆಯಲ್ಲಿ ಬಿಂಬಿತವಾಗಿವೆ. ಮನುಷ್ಯನ ದೇಹವೇ ದೇವಾಲಯ ಎನ್ನುವುದು ಪ್ರತಿ ಮನುಷ್ಯನ ಆತ್ಮವಿಶ್ವಾಸವನ್ನು ಮತ್ತು ಆತ್ಮಗೌರವವನ್ನು ಬಲಪಡಿಸುತ್ತದೆ. ಈ ದೈಹಿಕ ರಚನೆಯನ್ನು ದೇವಾಲಯವೆಂದು ಹೇಳಿರುವುದು ಸಮಾಜದಂಚಿನಲ್ಲಿದ್ದ ವಂಚಿತ ಸಮುದಾಯದ ಸುಪ್ತ ಮನಸ್ಸಿನಲ್ಲಿ ಬೇರೂರಿದ್ದ ಅಸಮಾನತೆಯನ್ನು ನಾಶಗೊಳಿಸಿದ್ದರ ರೂಪಕವಾಗಿದೆ. ಮನುಸ್ಸು ಮತ್ತು ಕ್ರಿಯೆಯ ನಡುವಿನ ಕಂದರವನ್ನು ಸೃಷ್ಟಿಸಿದ ಐತಿಹ್ಯಗಳನ್ನು ಒಡೆದಿದ್ದಾರೆ. ವೇದ-ಪುರಾಣಗಳನ್ನು ದಿಕ್ಕರಿಸಿ ಮನುಕುಲದ ಉದ್ಧಾರಕ್ಕೆ ಹೊಸ ಭಾಷ್ಯವನ್ನು ಬರೆದಿರುವ ಈ ವ್ಯಕ್ತಿ ನಮ್ಮ ಮಾನಸದಲ್ಲಿ ಅಣ್ಣ ಬಸವಣ್ಣನಾಗಿರುವರು. ಇವರು ಯಾವತ್ತು ದೇವರಾಗಿ ಅಥವಾ ದೈವಿಸಂಭೂತನಾಗಿ ದಕ್ಕಿದವರಲ್ಲ. ಕೇವಲ ನಮ್ಮ ಸಾಮಾಜಿಕ-ರಾಜಕೀಯ-ಧಾರ್ಮಿಕ ಕೊಳಕು ತೊಳೆಯುವ ಮಡಿವಾಳ ಮಾಚಯ್ಯನ ರೂಪಕ. ಬಸವಣ್ಣ ಸಾಮಾಜಿಕ-ಧಾರ್ಮಿಕ ಅಧಿಕಾರದ ವಿಕೇಂದ್ರಿಕರಣ ಹಾಗೂ ಸಾಮಾಜಿಕ ಮೇಲ್ಚಲನೆ ದಕ್ಕಿಸಿಕೊಟ್ಟ ಒಬ್ಬ ಹೋರಾಟಗಾರ ಮಾತ್ರ. ಮನುಷ್ಯನು ತನ್ನ ವ್ಯಕ್ತಿತ್ವದ ಗಡಿಗಳ ಮಿತಿಯನ್ನು ದಾಟುವ ಹಂಬಲದ ಸೂಚಕ ಈ ಬಸವಣ್ಣ ಆದ್ದರಿಂದ, ವಚನ ಚಳುವಳಿಯ ಒಟ್ಟು ಆಶಯ ಮಾನವನ ಅಸ್ತಿತ್ವದ ಶೋಧನೆಯಾಗಿ ಪ್ರತಿನಿಧಿಕರಣಗೊಂಡಿದೆ. ಈ ಪ್ರತಿನಿಧಿಕರಣವು ಅಧಿಕಾರದ ನೆಲೆಯಿಂದ ಸಾಮಾನ್ಯ ಮನುಷ್ಯನ ನೆಲೆಗೆ ವಿಸ್ತಾರಗೊಂಡಿದೆ. ಈ ಪ್ರಕ್ರಿಯೆಯ ಹಿಂದಿನ ಪ್ರೇರಣೆ ಬಸವಣ್ಣ ಅನ್ನವುದು ಮುಖ್ಯ ಹಾಗಾಗಿ ಇವರೊಬ್ಬ ಸಾಮಾಜಿಕ ಕಾಳಜಿಯ ಆಕ್ಟ್ವಿಸ್ಟ್ ಆಗಿ ದಕ್ಕಿರುತ್ತಾರೆ. ಕಾಲ ದೇಶಗಳ ಹಂಗನ್ನು ಮೀರಿ ಒಂದು ಸಮುದಾಯದ ಹಿತಾಸಕ್ತಿಯನ್ನು ಕಾಪಾಡಿದ/ಕಾಪಾಡುವ ಆಲೋಚನಕ್ರಮವನ್ನು ಹುಟ್ಟು ಹಾಕಿದ ಜನಪರ ಚಿಂತಕ ಬಸವ.

‘ನುಡಿದರೆ ಮುತ್ತಿನ ಹಾರದಂತಿರಬೇಕು......’ ಎನ್ನುವಂತಹ ವಚನಗಳಲ್ಲಿ ನಿರ್ದೇಶನ ಅಥವಾ ಒತ್ತಾಯದ ಧ್ವನಿಯನ್ನು ಗುರುತಿಸಲಕ್ಕೆ ಸಾಧ್ಯವಿಲ್ಲ. ಇಲ್ಲಿ ಸಾಮಾಜಿಕ ಸಮಾನತೆಯ ಸಂಕೇತವಾಗಿ ಭಾಷೆಯನ್ನು ಬಳಸಬೇಕು ಎನ್ನುವ ಹಂಬಲವಿದೆ. ನಮ್ಮ ನುಡಿ ಯಾವುದೇ ಸಾಮಾಜಿಕ-ಧಾರ್ಮಿಕ ಅಸಮಾನತೆಯ ರೂಪಕವಾಗಿ ಬಳಕೆಯಾಗಕೂಡದು ಎನ್ನುವ ಸಾಂಸ್ಕೃತಿಕ ವಿವೇಕ ಅಲ್ಲಿದೆ. ‘ದಯೆ ಬೇಕು ಸಕಲ ಪ್ರಾಣಿಗಳಲಿ’ ಅನ್ನುವ ಹಂಬಲವು ಕೂಡ ಜೀವ ಕಾರುಣ್ಯದ ತುಡಿತವಾಗಿದೆ. ದಯವೇ ಧರ್ಮದ ಮೂಲ ಅನ್ನುವ ಮಾತು ಜೀವಪರ ಧರ್ಮವನ್ನು ಅನುಷ್ಠಾನಗೊಳಿಸಿದ ಕ್ರಮ. ಅದಕ್ಕಾಗಿಯೇ ಬಸವಣ್ಣನ ‘ಹರಕೆಯ ಕುರಿ ಬಲಿಯ ಕುರಿತು ಮಾತಾಡುವಾಗ ಕೊಲ್ಲಿದವನು ಉಳಿವನೇ?’ ಎಂಬ ಮರು ಪ್ರಶ್ನೆ ಎತ್ತುತ್ತಾರೆ. ಸಮಾಜದಂಚಿನಲ್ಲಿರುವ ಜನರ ಆಶೋತ್ತರಗಳನ್ನು ಕಾಪಾಡುವ ಹಾಗೂ ಅವರ ಬದುಕಿಗೂ ಒಂದು ಸಾಮಾಜಿಕ-ರಾಜಕೀಯ ಅಸ್ತಿತ್ವದ ನೆಲೆಗಳನ್ನು ಕಟ್ಟಿಕೊಡುವ, ಸಾಮಾಜಿಕ ತಾರತಮ್ಯವನ್ನು ನಿರ್ನಾಮ ಮಾಡುವ ಹಾಗೂ ಅಂತವರನ್ನು ಸಾಮಾಜಿಕ ಮುನ್ನೆಲೆಗೆ ತರುವ ಪ್ರೀತಿಯ ಬಸವಣ್ಣನಾಗಿ ದಕ್ಕಿದ್ದು ಅಪಾರ ಜನಸಮೂಹಕ್ಕೆ. ಬಸವಣ್ಣರನ್ನು ಶಿವನ ವಾಹನ ನಂದಿಯ ಮರು ಅವತಾರವೆಂದು ನಂಬಿರುವ ಸಾಧ್ಯತೆಗಳೂ ಇವೆ. ನಮ್ಮ ರೈತರು ಬಸವ ಜಯಂತಿಯನ್ನು ಬಸವೇಶ್ವರನ ಪುಣ್ಯ ಜಯಂತಿಯಾಗಿ [ಧಾರ್ಮಿಕ ಆಚರಣೆ] ಆಚರಿಸುವ ಬದಲಾಗಿ, ತಮ್ಮ ಏಳ್ಗೆಗಾಗಿ ನಿರಂತರ ಶ್ರಮಿಸುವ ಶ್ರಮಿಕ ಮೂಕ ಪ್ರಾಣಿಗಳಾದ ಎತ್ತುಗಳ ಹಬ್ಬವಾಗಿ ಆಚರಿಸುವುದು ಗಮನಾರ್ಹ. ರೈತರು ಇಡೀ ದಿವಸ ಎತ್ತುಗಳ ಮೈತೊಳೆದು, ಅವುಗಳ ಕೊಂಬುಗಳನ್ನು ಶೃಂಗರಿಸಿ, ಪೂಜೆ-ನೈವೇಧ್ಯ ಕಾರ್ಯಗಳನ್ನು ನೆರವೆರಿಸಿ, ಆ ದಿನ ಸಂಜೆ ಊರಸುತ್ತ ಮೆರವಣಿಗೆ ಹೋಗಿ ಸಂಬ್ರಮಿಸುವ ಹಬ್ಬವಾಗಿದೆ. ಈ ಹಬ್ಬವನ್ನು ಆಚರಿಸುವ ಮುಖೇನ ರೈತ ತನಗಾಗಿ ಬದುಕುವ ಮತ್ತು ಬದುಕು ನೀಡುವ ಒಂದು ಸಾರ್ಥಕ ಜೀವದ ಋಣಭಾರವನ್ನು ತೀರಿಸುವ ಧೈನ್ಯತೆಯ ಸೂಚಕವಾಗಿ ಬಸವನನ್ನು ಸೃಷ್ಟಿಸಿಕೊಂಡು ಈ ಹಬ್ಬವನ್ನು ಆಚರಿಸುವುದು ವಿಶೇಷ.

ಬಸವಣ್ಣನ ಒಂದು ವಚನಬಸವೇಶ್ವರನನ್ನು ಬಂಡವಾಳವಾಗಿ ಬಳಸಿಕೊಳ್ಳುತ್ತಿರುವ ಜಾತಿವಾದಿಗಳು, ರಾಜಕಾರಣಿಗಳು ಆ ಜಾತಿಪರ ಕಂಕಣಕಟ್ಟಿ ಹೋರಾಡುತ್ತಿದ್ದೇವೆ ಎನ್ನುವ ಡೃಢಸಂಕಲ್ಪದ ವೇಷದಲ್ಲಿ ನಟಿಸುತ್ತಿರುವ ಕೋಮುಕಟುವಾದಿಗಳು ಬಸವೇಶ್ವರನನ್ನು ಸೃಷ್ಟಿಸಿದರು. ಸಾಮಾನ್ಯ ಜನ ಬಸವ ಜಯಂತಿಯಂತಹ ದಿನಗಳಂದು ಬಸವ ಅಥವಾ ಬಸವಣ್ಣನ ಆದರ್ಶಗಳನ್ನು ಪುನನೆನಪಿಸಿಕೊಂಡು ತಮ್ಮ ಆದರ್ಶದ[?] ಬದುಕನ್ನು ಕಟ್ಟಿಕೊಳ್ಳುವ ಇರಾಧೆಯ ಆಚರಣೆಯಾಗಿ ಆಚರಿಸಿದ್ದೂ ಇತಿಹಾಸದಲ್ಲಿಯೇ ಇಲ್ಲ ಎನ್ನಬಹುದು. ಜಾತಿವಾದಿಗಳು ಜಾತ್ಯಾತೀತ ಭಾಷಣ ಮಾಡುತ್ತ ಜಾತೀಯತೆಯ ವಿಷಬೀಜವನ್ನು ಬಿತ್ತರಿಸುವ ಸಮಾಜಘಾತುಕ ಕಾರ್ಯವನ್ನು ನಿರಂತರವಾಗಿ ಜೀವಂತವಾಗಿಸುವ ಪಾಪದ ಕೆಲಸವನ್ನು ಬಸವನ ಪುಣ್ಯಜಯಂತಿಯ ಹೆಸರಿನಲ್ಲಿ ನಡಸುತ್ತ ಬಂದಿದ್ದಾರೆ. ಬಹುಶ ಇಂತಹದೇ ಭಾಷಿಕ ರಚನೆಯ ನೆಲೆಗಳ ಸಂಕಥನವನ್ನು ಭಾಷೆಯೂ ಘಾತಕ ವೆಂದು ಅಲ್ಲಮನು ವ್ಯಕ್ತಪಡಿಸಿರಬಹುದು. ಈ ಭಾಷಿಕ ರಚನೆಗಳು ಇಂದಿನ ಸಾಮಾಜಿಕ-ಸಾಂಸ್ಕೃತಿಕ ರಚನೆಗಳೂ ಆಗಿರುತ್ತವೆ ಎನ್ನುವುದು ಸ್ಪಷ್ಟ. ಈ ಸಾಮಾಜಿಕ ವೈವಿಧ್ಯತೆಯನ್ನು ಏಕೀರೂಪಿಸುವ ಮಾದರಿಗಳು ಸಾಂಸ್ಕೃತಿಕ ವೈವಿಧ್ಯತೆಗೆ ಅಪಾಯವನ್ನು ಒಡ್ಡದೆ ಇರಲಾರವು. ಇಂತಹ ಮಾದರಿಗಳು ಸಾಮಾಜಿಕ-ಧಾರ್ಮಿಕ ಐಕ್ಯತೆ ಮತ್ತು ಏಕತೆಯ ನಡುವಿನ ವ್ಯತ್ಯಾಸಗಳನ್ನು ಗುರುತಿಸಲು ಸಾಧ್ಯವಿಲ್ಲ. ಈ ಏಕರೂಪಾತ್ಮಕ ಮಾದರಿಗಳು ಸೃಷ್ಟಿಸುವ ಅಪಾಯಗಳ ಬಗ್ಗೆ ನಮ್ಮ ಮಠಾಧೀಶರು ಮತ್ತು ರಾಜಕಾರಣಿಗಳು ಯೋಚಿಸುವ ಸಂದರ್ಭಗಳು ತೀರಾನೇ ಕಮ್ಮಿ. ಕಾರಣ ಜಾತಿಪದ್ಧತಿಯು ಸಾಮ್ರಾಜ್ಯಶಾಹಿ ಸ್ವರೂಪದ್ದು ಮತ್ತು ಅಧಿಕಾರ ಸಂಬಂಧದ ವಿಭಿನ್ನ ಆಯಾಮಗಳನ್ನು ಒಳಗೊಂಡಿರುವುದು. ಜಾತ್ಯಾತೀತ ಶಕ್ತಿಗಳು ಕೂಡ ಒಳಗಣ ಜಾತೀಯತೆಯನ್ನು ಮೀರಲಾರದೆ ಹುಸಿ ಆದರ್ಶದ ಹೊರಗಣ ಜಾತ್ಯಾತೀತತೆಯನ್ನು ಮೆರೆಯುತ್ತವೆ. ಜಾತೀಯತೆ ಮತ್ತು ಧಾರ್ಮಿಕವಾದವು ಯಜಮಾನ್ಯ ಸಂಸ್ಕೃತಿಯ ಪ್ರತೀಕ. ಈ ಸಂಕಥನಗಳು ಹಠದಿಂದ ನಿರಂತರ ಪ್ರತ್ಯೇಕತೆಯ ವಾದಗಳನ್ನು ಮಂಡಿಸುತ್ತವೆ. ಇದು ಮಾತ್ರವಲ್ಲದೆ ವೈವಿಧ್ಯತೆಯಲ್ಲಿರುವ ಏಕತೆಯನ್ನು ನಾಶಮಾಡಿ ಕೇವಲ ಏಕೀಕರಿಸುವ ಹುನ್ನಾರಗಳಿಗೂ ಕಮ್ಮಿ ಇಲ್ಲ. ಇಂತಹ ಹುನ್ನಾರಗಳು ಸಾಂಸ್ಕೃತಿಕ ಒಗ್ಗಟ್ಟನ್ನು ಛಿದ್ರಗೊಳಿಸುವ ಕ್ರಮಗಳನ್ನು ಹುಟ್ಟು ಹಾಕುತ್ತವೆ. ಈ ವಿನಾಶದ ಕಾರಣಕ್ಕಾಗಿ ಅಂತರ್ಜಾತಿ ಮದುವೆಗಳು ಸೂತಕ ಕಾರ್ಯದಂತೆ ಪರಿಗಣಿಸಲ್ಪಟ್ಟಿವೆ.

ಇಂತಹ ಸಾಕಷ್ಟು ವಿಪರ್ಯಾಸ, ವೈರುಧ್ಯಗಳ ನಡುವೆ ಬಸವೇಶ್ವರ ಬಸವನಾಗಿ ಅಥವಾ ಬಸವಣ್ಣನಾಗಿ ದಕ್ಕಿರುವ ನಿದರ್ಶನಗಳು ಬಹಳನೇ ಕಮ್ಮಿ. ಇಂತಹ ಸನ್ನಿವೇಶಗಳು ಕಾಣಸಿಗುವುದಾದರೆ ಸಮಾಜದಂಚಿನಲ್ಲಿರುವ ಸಾಮಾನ್ಯ ಜನರಲ್ಲಿ ಮತ್ತು ರೈತರಲ್ಲಿ ಕಾಣಬಹುದು. ಇಂದು ಬಸವ ತತ್ವಗಳು ಮುಂಚೂಣೆಗೆ ಬರುತ್ತಿರುವುದು ರಾಜಕೀಯ ದೃವಿಕರಣಕ್ಕಾಗಿ ಅಥವಾ ಲಾಭಕ್ಕಾಗಿ ಹಾಗೂ ಮಠಾದೀಶರ ಮತ್ತು ಕೋಮುವಾದಿಗಳ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲಕ್ಕೆ ಮಾತ್ರ. ಜಾತಿ ವ್ಯವಸ್ಥೆ ಕುರಿತು ಸಾಕಷ್ಟು ಪ್ರತಿಕ್ರಿಯೆಗಳು ಬಂದಿರುವುದನ್ನು ಚರಿತ್ರೆಯ ಉದ್ದಕ್ಕೂ ಕಾಣಬಹುದು. ಜಾತಿ ರಾಜಕಾರಣದ ಹಿಂದಿನ ಪ್ರೇರಣೆಗಳ ಶೋಧನೆಯ ಅಗತ್ಯ ಕಂಡುಕೊಳ್ಳುವ ಸಂಕಲ್ಪ ಯಾರೂ ಮಾಡಿದ ಹಾಗಿಲ್ಲ ಅಥವಾ ಅದರ ಅಗತ್ಯವೂ ಇರಲಿಕ್ಕಿಲ್ಲ. ಚರಿತ್ರೆಯು ತನ್ನ ಕಾಲದ ಸಾಮಾಜಿಕ-ಧಾರ್ಮಿಕ ಸ್ಥಿತಿಗಳನ್ನು ಪುನರ್‌ರೂಪಿಸಿಕೊಳ್ಳುವುದರ ಹಿಂದಿನ ಪ್ರೇರಣೆ ಕೇವಲ ರಾಜಕಾರಣವಿರಲಾರದು, ಆದರೆ ಅದು ಹೆಚ್ಚು ನಗಣ್ಯವಾಗುತ್ತಿರುವುದು ರಾಜಕಾರಣಕ್ಕೆ ಮಾತ್ರ. ಜಾತಿ/ಧರ್ಮಗಳು ಮನುಕುಲದ ಜೀವನಕ್ರಮದ ಚಲನೆಯೂ ಹೌದು ಮತ್ತು ವೈವಿಧ್ಯತೆಯ ಲಕ್ಷಣವೂ ಹೌದು ಆದರೆ ಈಗ ಜಾತಿ/ಧರ್ಮಗಳು ರಾಜಕಾರಣದ ಗಾಳಗಳಾಗಿ ಮಾತ್ರ ಉಳಿದುಕೊಂಡಿರುವುದು ಮನುಕುಲದ ಚಾರಿತ್ರಿಕ ಅವಮಾನವೇ ಸರಿ.

[ಚಿತ್ರಗಳು-ಸಂಗ್ರಹದಿಂದ]

ಪುಟದ ಮೊದಲಿಗೆ
Votes: 5 Rating: 4.2


ಇಲ್ಲಿ ಚಿಂತೆನೆಯಿಲ್ಲ, ಚಿಂತನೆಯ ನಟನೆ ಇದೆ. ಇಲ್ಲಿ ಸಂಕೀರ್ಣತೆ ಇಲ್ಲ, ಸಂಕೀರ್ಣತೆಯ ಸೋಗು ಇದೆ. ಇಲ್ಲಿ ಮಾನವೀಯ ಕಾಳಜಿ ಇಲ್ಲ. ಮಾನವೀಯತೆಯ ಪೋಸು ಇದೆ....
Re: avaravara bhavakke.....
Re: ನಿಮ್ಮ ಭಾವಕ್ಕೆ ನೀವು ಪ್ರಾಮಾಣಿಕರಾಗಿರಿ. ಮಿಕ್ಕವರ ಭಾವದ ಉಸಾಬರಿ ತಮಗೇಕೆ?


ಮೇಟಿಯವರೆ, ಸರಳವಾಗಿ ಹೃದ್ಯವಾಗಿ ಬರೆಯಬಹುದಿತ್ತಲ್ಲ.. ಬಸವಣ್ಣ ಅನುಭವವಾಗಿ ಬರದ ಹೊರತು ಅವನ ಧಾರ್ಮಿಕ ಪ್ರಜ್ಞೆ ಅರ್ಥವಾಗುವುದಿಲ್ಲ....

ಹಳೆಯ ಗೃಹೀತಗಳನ್ನೇ ಹೊಸ ಅರಿವು ಎಚ್ಚರ ಎಂಬ ರೀತಿಯಲ್ಲಿ ಬಿಕರಿ ಮಾಡುವ ಸಿದ್ಧಶೈಲಿಯ ಚಿಂತನೆ. ಇಂದಿನ ಸಮಸ್ಯೆಗಳಿಗೆ ಹನ್ನೊಂದನೇ ಶತಮಾನದ ಪಳೆಯುಳಿಕೆಗಳಿಂದ ಪ್ರೇರಣೆ ಪಡೆದು ಭವಿಷ್ಯವನ್ನು ಕಟ್ಟಲಾಗುವುದಿಲ್ಲ. ಈ ಸರಳ ಸತ್ಯವನ್ನೂ ತಿಳಿಯದ ಜನರು ಇತಿಹಾಸ, ಜಾತಿ, ಅಧ್ಯಾತ್ಮ ಎಲ್ಲವನ್ನೂ ಒಂದೇ ಎರಕದಲ್ಲಿ ಹಾಕಿ ಅಮೂರ್ತ ಚಿಂತನೆಯ ಪಾಕವನ್ನು ಕೊಡುತ್ತಾರೆ. -- ಸಿದ್ದಮುಖಿ...

ತನ್ನ ವಿರುಧ್ಧದ ಯಾವುದೇ ಕ್ರಾಂತಿಯನ್ನು ವೈದಿಕ ಧರ್ಮವು ನುಂಗಿ ನೊಣೆದಿದೆ. ಅದರ ವಿರುಧ್ಧ ಹೋರಾಡಿದ ಜೈನ ಧರ್ಮ, ಬಸವ ಧರ್ಮ, ಇನ್ನೂ ಎಷ್ಟೆಷ್ಟೋ ಸಣ್ಣ ಪುಟ್ಟ ಸಂಚಲನಗಳನ್ನೆಲ್ಲ ವೈದಿಕ ಧರ್ಮ ಆಪೋಶನ ತೆಗೆದುಕೊಂಡಿತು. ತಮ್ಮ ಕಾಳಜಿ, ನಿಲುವುಗಳು ಇಷ್ಟವಾದವು. ಆದರೆ ತಮ್ಮ ಭಾಷೆ ಸುಲಲಿತವಾಗಿಲ್ಲ. ಓದಲು ಶ್ರಮ ಪಡಬೇಕಾಗುತ್ತದೆ. "ಈ ರೂಪಾಂತರಕ್ಕೆ ಕಾರಣಗಳು ಇಲ್ಲವೇ ಇಲ್ಲ ಅನ್ನುವದನ್ನು ತಳ್ಳಿಹಾಕುವಂತಿಲ್ಲವಾದರೂ ಆ ಯಾವ ಕಾರಣವು ಇದರ ಪುನರ್ ಅಸ್ತಿತ್ವದ ಚಹರೆಗಳನ್ನು ಕಟ್ಟಿಕೊಡುವ ಇರಾದೆ ಉಳ್ಳದ್ದಲ್ಲ." ಇಂತಹ ವಾಕ್ಯಗಳು ಹೆಚ್ಚು ಇದ್ದಷ್ಟೂ ಓದುಗನಿಗೆ ಮಂಕು ಕವಿಯುತ್ತ, ಓದಿ ಮುಗಿಸುವಾಗ ಜ್ವರ ಬಂದಂತಾಗುತ್ತದೆ. ಚಿಂತನೆಗೆ ಹಚ್ಚಿದ್ದಕ್ಕೆ ಧನ್ಯವಾದಗಳು. - ವರಾಹ...
Re: ವರಾಹ, ವೈದಿಕ ಧರ್ಮ ಎಂದರೆ ಏನು? ಅದರ ಗುಣಸ್ವರೂಪಲಕ್ಷಣಗಳು ಯಾವುವು? ಎಲ್ಲಾ ಕ್ರಾಂತಿಯನ್ನು ನುಂಗುವ ಶಕ್ತಿ ವೈದಿಕ ಧರ್ಮಕ್ಕೆ ಇದೆಯೆಂದಾರೆ, ಆ ಶಕ್ತಿಯ ಮೂಲವೇನು? -- ಆಸಕ್ತ ಓದುಗ
Re: ಆಸಕ್ತ ಓದುಗರೆ, ಏನ್ರೀ ಎಂತೆಂತ ಕಷ್ಟದ ಪ್ರಶ್ನೆಗಳನ್ನು ಕೇಳ್ತೀರಲ್ರೀ!! ವೈದಿಕ ಧರ್ಮ-ಬ್ರಾಹ್ಮಣ್ಯ-ಶ್ರೇಣೀಕೃತ ಸಮಾಜ-ಸಾಮಾಜಿಕ ಕ್ರಾಂತಿ ಎಲ್ಲಾ ಮಿಕ್ಸ್ ಮಾಡಿ ಏನೋ ಪರಿಣಾಮಕಾರಿಯಾಗಿ ಹೇಳಿದೆ ಅಂತ ಬೀಗುವವರ ಸಂಖ್ಯೆ ದಿನೆ ದಿನೆ ಹೆಚ್ತಾ ಇದೆಯಲ್ರೀ. ವರಾಹ ಅವರು ಲಂಕೇಶರ ಔಟ್ ಡೇಟೆಡ್ ಚಿಂತನೆಯನ್ನೇ ಇಲ್ಲಿ ಬಂದು ಒಪ್ಪಿಸುತ್ತಿದ್ದಾರೆ ಅಂತ ನಿಮಗೆ ಅನ್ನಿಸಲ್ವೆ?

ಭಾಷೆ ಮತ್ತು ರಾಜಕಾರಣ: ಚೋಮ್‌ಸ್ಕಿ ಸಂದರ್ಶನ ಮೇಟಿ ಮಲ್ಲಿಕಾರ್ಜುನ

ಭಾಷೆ ಮತ್ತು ರಾಜಕಾರಣ: ಚೋಮ್‌ಸ್ಕಿ ಸಂದರ್ಶನ
ಮೇಟಿ ಮಲ್ಲಿಕಾರ್ಜುನ
ಸೋಮವಾರ, 8 ಜೂನ್ 2009 (07:56 IST)
ನೋಮ್ ಚೋಮ್‌ಸ್ಕಿ
ನೋಮ್ ಚೋಮ್‌ಸ್ಕಿ ನಮ್ಮ ಕಾಲದ ಬಹು ಮುಖ್ಯ ಮತ್ತು ಬಹುಮುಖಿ ವಿದ್ವಾಂಸ. ಆಧುನಿಕ ಭಾಷಾಶಾಸ್ತ್ರದ ಆದ್ಯ ಪ್ರವರ್ತಕ, ತತ್ವಜ್ಞಾನಿ, ರಾಜಕೀಯ ಹಾಗೂ ಸಾಮಾಜಿಕ ವಿಶ್ಲೇಷಕ, ಮಾಧ್ಯಮ ಟೀಕೆಕಾರ. ಚೋಮ್‌ಸ್ಕಿ ಸಾಕಷ್ಟು ವಿಷಯಗಳನ್ನು ಕುರಿತು ತಮ್ಮ ಚಿಂತನೆಗಳನ್ನ ಮಂಡಿಸಿದ್ದಾರೆ. ಭಾಷಾಶಾಸ್ತ್ರ, ಯುದ್ಧ ವಿರೋಧ ನೀತಿ, ಅಮೆರಿಕಾದ ವಿದೇಶಾಂಗ ನೀತಿ, ಅಂತರಾಷ್ಟ್ರೀಯ ಬಿಕ್ಕಟ್ಟುಗಳು, ಭಯೋತ್ಪಾದನೆ, ಸಾಮ್ರಾಜ್ಯಶಾಹಿತ್ವ, ಆರ್ಥಿಕ ಬಿಕ್ಕಟ್ಟು, ಜಾಗತೀಕರಣ, ಅಣು ಒಪ್ಪಂದ, ನ್ಯೂಕ್ಲಿಯರ್ ವೆಪನ್ಸ್ ಮುಂತಾದವುಗಳ ಬಗ್ಗೆಯಲ್ಲ ಅವರ ವಿಚಾರ ಸರಣಿ ಹರಿದಿದೆ. ಅಮೆರಿಕಾ ಪ್ರಭುತ್ವದ ವಿರುದ್ಧ ಮಾತನಾಡುವ ಛಾತಿಯಿರುವ ಏಕೈಕ ಭಿನ್ನಮತೀಯ ಆನಾರ್ಕಿಸ್ಟ್ ಚಿಂತಕ. ಅಮೆರಿಕಾದ ‘ದಿ ನ್ಯೂ ಯಾರ್ಕ್ ಟೈಮ್ಸ್’ ಪತ್ರಿಕೆಯು ನೋಮ್ ಚೋಮ್‌ಸ್ಕಿ ಜಗತ್ತಿನಲ್ಲೆ ಜೀವಂತವಿರುವ ಬಹುದೊಡ್ಡ ಬುದ್ಧಿಜೀವಿ ಎಂದೂ ಬಣ್ಣಿಸಿದೆ. ಚರಿತ್ರೆಯಲ್ಲಿ ಚೋಮ್‌ಸ್ಕಿಯನ್ನು ಮತ್ತು ಇವರ ತಾತ್ವಿಕತೆಯನ್ನು ಡಾರ್ವಿನ್ ಮತ್ತು ಡೆಕಾರ್ಟಸ್ ಅವರಷ್ಟೆ ಪ್ರಮುಖ ಮತ್ತು ಅವರಿಗೆ ಸಮಸಮ ಎಂದು ಗುರುತಿಸಲಾಗಿದೆ. ಇವರನ್ನು ಜಗತ್ತಿನ ಪ್ರಖ್ಯಾತ ಹತ್ತು ಜನ ವಿದ್ವಾಂಸರಲ್ಲಿ ಒಬ್ಬರನ್ನಾಗಿ ಬಣ್ಣಿಸಿರುವುದು ವಿಶೇಷ.

ಜಗತ್ತಿನ ಪ್ರತಿಷ್ಟಿತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ಮೈಸ್ಸಾಚುಸೆಟ್ಸ್ ಇನ್ಸ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಚೋಮ್‌ಸ್ಕಿರಿಗೆ ೧೯೫೫ರಲ್ಲಿ ಪ್ರಾಧ್ಯಾಪಕ ಹುದ್ದೆ ಲಭಿಸಿತು. ಇಲ್ಲಿ ಪ್ರಾಯೋಗಿಕ ವಿಜ್ಞಾನಿಗಳ ವಿಭಾಗದಲ್ಲಿ ಅವರಿಗೆ ಸ್ವತಂತ್ರ ಅಧಿಕಾರವನ್ನು ಕೊಡಲಾಗಿತ್ತು. ಇದು ಚೋಮ್‌ಸ್ಕಿಗೆ ಭಾಷಾಶಾಸ್ತ್ರ ಮತ್ತು ತತ್ವಶಾಸ್ತ್ರ ವಿಭಾಗವನ್ನು ಸ್ಥಾಪಿಸಲು ಸಾಧ್ಯವಾಯ್ತು. ಕೆಲವೇ ದಿನಗಳಲ್ಲಿ, ಜಗತ್ತಿನಲ್ಲಿಯೇ ಈ ವಿಭಾಗವು ಪ್ರಗತಿಪರ ಮತ್ತು ಹೊಸ ಬದಲಾವಣೆಯ ಭಾಷಾಶಾಸ್ತ್ರದ ಸಂಶೋಧನೆಯ ಕೇಂದ್ರವಾಗಿ ಹೊರಹೊಮ್ಮಿತು.

ಚಿಂತಕ ನೋಮ್ ಚೋಮ್‌ಸ್ಕಿ ಜೊತೆ ಡೇವಿಡ್ ಜೆ ಬ್ರೌನ್ ನಡೆಸಿದ ಸಂದರ್ಶನದ ಕನ್ನಡಾನುವಾದ ಇಲ್ಲಿದೆ.

ಡೇವಿಡ್: ಈ ಮೊದಲು ಇದ್ದಂತ ಮಾಧ್ಯಮ ಪ್ರಕಾರಗಳಾದ ದೂರದರ್ಶನ, ರೇಡಿಯೋ, ಮತ್ತು ದಿನಪತ್ರಕೆಗಳನ್ನು ಬಂಡವಾಳಶಾಹಿಗಳು ತಮ್ಮ ಏಕಸ್ವಾಮ್ಯದಲ್ಲಿಟ್ಟುಕೊಂಡಿದ್ದರು. ಆದರೆ, ಇಂಟರ್‌ನೆಟ್‌ ಅನ್ನು ತಮ್ಮ ಸ್ವಾಮ್ಯಕ್ಕೆ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ ಅನಿಸುತ್ತೆ. ಇದೇನಾದರೂ ಸಾಮಾಜಿಕವಾಗಿ ಪರಿಣಾಮ ಬೀರಿದೆ ಅಂತ ಅನ್ನಿಸುತ್ತಾ ನಿಮಗೆ?

ಚೋಮ್‌ಸ್ಕಿ: ಮೊದಲನೇಯದಾಗಿ, ಚಾರಿತ್ರಿಕವಾಗಿ ಇದು ನಿಜವಲ್ಲ, ನನಗೆ ಬೇರೆ ದೇಶಗಳ ಬಗ್ಗೆ ಏನು ಅಂತ ಗೊತ್ತಿಲ್ಲ. ಆದರೆ, ಆಧುನಿಕ ಮಾಧ್ಯಮದ ಇತಿಹಾಸವನ್ನು ಗಮನಿಸಿದರೆ, ವಿಶೇಷವಾಗಿ ಬ್ರಿಟನ್ ಮತ್ತು ಅಮೆರಿಕಾಕ್ಕೆ ಸಂಬಂಧಿಸಿದಂತೆ, ಕಳೆದ ಎರಡು ಶತಮಾನದಲ್ಲಿ ಮಾಧ್ಯಮವನ್ನು ಕುರಿತು ಗಣನೀಯ ಅಧ್ಯಯನ ಮಾಡಲಾಗಿದೆ. ಬಹುಶಃ ಹತ್ತೊಂಭತ್ತನೇಯ ಶತಮಾನವು ಪತ್ರಿಕಾ ಸ್ವಾತಂತ್ರ್ಯಕ್ಕೆ ಹೆಚ್ಚು ಆದ್ಯತೆ ನೀಡಿದ ಕಾಲವಾಗಿತ್ತು. ಹಾಗೂ ಮಾಧ್ಯಮವು ಬಹಳ ಪರಿಣಾಮಕಾರಿಯಾಗಿ, ವಿಭಿನ್ನವಾಗಿ ಬೆಳದದ್ದು ಈಗಲೇ ಎಂದೂ ಹೇಳಬೇಕು. ಆಗೀನ ಪತ್ರಿಕಾ ಬಳಗಕ್ಕೆ ಜನರ ಬೆಂಬಲ, ಅವರ ಪಾಲ್ಗೊಳ್ಳುವಿಕೆ ಹಾಗೂ ಕೊಡುಗೆ ಅಪಾರ. ಹಾಗಾಗಿ, ಮಾಧ್ಯಮ ಹೆಚ್ಚು ಜನಗಳನ್ನು ತಲುಪಲು ಸಾಧ್ಯವಾಗಿತ್ತು. ಹಾಗೂ ವೈವಿದ್ಯಮಯ ದೃಷ್ಟಿಕೋನ ಮತ್ತು ಅಭಿಪ್ರಾಯಗಳನ್ನು ರೂಪಿಸಲಿಕ್ಕೂ ಸಾಧ್ಯವಾಗಿತ್ತು.

ಕ್ರಮೇಣ ಇದು ಬದಲಾಯಿತು. ಅಂದರೆ, ಬ್ರಿಟನ್‌ನಲ್ಲಿ ಸ್ವತಂತ್ರವಾಗಿದ್ದ ಪ್ರೆಸ್‌ಗಳನ್ನು ಸರಕಾರವು ತೆರಗೆ ವಿಧಿಸುವ ಮತ್ತು ಇನ್ನಿತರ ರೀತಿಗಳಲ್ಲಿ ಸೆನ್ಸಾರ್ ಮಾಡುವ ಪ್ರಯತ್ನಗಳನ್ನು ನಡೆಸಿತು. ಆದರೆ, ಈಗ ಇದು ಬದಲಾಗಿದೆ, ಇದಕ್ಕೆ ಬೇಕಾದಷ್ಟು ಮಾರ್ಗಗಳಿವೆ. ಇದರಿಂದ ಅಂತಿಮವಾಗಿ ಬಂಡವಾಳಶಾಹಿಯ ಕೈವಶ ಮತ್ತು ಜಾಹಿರಾತು-ಅವಲಂಬನೆಯ ಪ್ರಭಾವದಿಂದ ಸ್ವತಂತ್ರವಾಗಿ ನಡೆಯುತ್ತಿದ್ದ ಪ್ರೆಸ್‌ಗಳು ಮಣ್ಣುಪಾಲಾದವು. ಕಾರಣವೇನೆಂದರೆ, ಇವುಗಳಿಗೆ ಯಾವುದೇ ವ್ಯಾಪಾರದ ಸ್ಥಿರತೆಯಿಲ್ಲ, ಬಂಡವಾಳ ಹೂಡಿಕೆಯ ಕೊರತೆ ಮತ್ತು ಜಾಹಿರಾತುಗಳ ಅಭಾವ. ಹಾಗೂ ಕಾಲ ಕ್ರಮೇಣ ಮಾಧ್ಯಮವು ತನ್ನ ತೀಕ್ಷ್ಣತೆ ಮತ್ತು ವ್ಯಾಪಕತೆಯನ್ನು ಕಳೆದುಕೊಂಡಿತು. ವಾಸ್ತವವಾಗಿ, ಕಳೆದ ಕೆಲವು ವರ್ಷಗಳಿಂದ ಇದು ನಿರಂತರವಾಗಿ ನಡೆದಿದೆ. ಹಾಗಾಗಿ, ಜನ ಬೆಂಬಲಿತ ಸ್ವತಂತ್ರ ಮಾಧ್ಯಮಗಳು ಬಹುತೇಕ ಕಣ್ಮರೆಯಾಗಿವೆ.

ಉದಾಹರಣೆಗೆ ಅಮೆರಿಕಾದಲ್ಲಿ ಐವತ್ತರ ದಶಕದಲ್ಲಿ ಸುಮಾರು ಎಂಟನೂರು ಕೂಲಿ/ಕಾರ್ಮಿಕ ಬೆಂಬಲಿತ ದಿನ ಪತ್ರಿಕೆಗಳು ವಾರಕ್ಕೆ ಅಂದಾಜು ಮೂವತ್ತು ಮಿಲಿಯನ್ ಜನರಿಗೆ ತಲುಪುತ್ತಿದ್ದವು. ಆದರೆ ಇಂದು ಇದು ಖಂಡಿತವಾಗಿ ಸಂಪೂರ್ಣ ಮಾಯವಾಗಿದೆ. ಹಿಂದಿನ ಶತಮಾನದ ಪ್ರಾರಂಭದ ದಿನಗಳನ್ನು ಅವಲೋಕಿಸಿದರೆ, ಜನಪರವಾದ ಪತ್ರಿಕೆಗಳು ಅಂದರೆ ನಾವು ಯಾವುದನ್ನು ಎಡಪಂಥೀಯ ಪ್ರಣೀತ ನಿಯತಕಾಲಿಕವೆಂದು ಕರೆಯುತ್ತಿದ್ದೆವೊ? ಅವುಗಳು ಯಾವುದೇ ಕಮರ್ಷಿಯಲ್ ಪತ್ರಿಕೆಗಳ ರೆಂಜಿಗಿಂತೇನು ಕಮ್ಮಿಯಿರಲಿಲ್ಲ. ಇಂಗ್ಲೆಂಡಿನ ಸ್ಥಿತಿಯೂ ಇದೇ ಆಗಿತ್ತು. ಹಾಗಾಗಿ ಮಾಧ್ಯಮವು ನಿರಂತರವಾಗಿ ಏಕಸ್ವಾಮ್ಯದಲ್ಲಿತ್ತು ಎನ್ನುವದು ಸಂಪೂರ್ಣವಾಗಿ ನಿಜವಲ್ಲ. ಆದರೆ, ಕ್ರಮೇಣ ಬಂಡವಾಳಶಾಹಿ ಸಂಚಿತ ಬೆಳವಣಿಗೆ ಮತ್ತು ಜಾಹಿರಾತುಗಳ ಅವಲಂಬನೆಯಿಂದ ಈ ಪ್ರಕ್ರಿಯೆ ಮೊದಲುಗೊಂಡಿತು.

ಆಧುನಿಕ ಆರ್ಥಿಕ ವ್ಯವಸ್ಥೆಯ ಹಾಗೆಯೇ ಇಂಟರ್‌ನೆಟ್ ಕೂಡ ಬಹಳ ಪ್ರಮುಖವಾದ ವ್ಯವಸ್ಥೆ. ಮೊದಲು ಸುಮಾರು ಮೂರು ದಶಕಗಳ ಕಾಲ ಇಂಟರ್‌ನೆಟ್‌ ರಾಷ್ಟ್ರ-ಪ್ರಭುತ್ವ ವ್ಯವಸ್ಥೆಯಲ್ಲಿ ಬೆಳೆಯಿತು. ಅದು ಪೆಂಟಗಾನ್ ಇರಬಹುದು ಅಥವಾ ನಂತರದ ರಾಷ್ಟ್ರೀಯ ವಿಜ್ಞಾನ ಫೌಂಡೇಶನ್ ಆಗಿರಬಹುದು. ಆದರೆ, ಇದು ತೊಂಬತ್ತರ ದಶಕದ ಮಧ್ಯದಲ್ಲಿ ಖಾಸಗೀಕರಣಗೊಂಡಿತು ಆವಾಗಿನಿಂದ ಇದರ ಏಕಸ್ವಾಮ್ಯದ ಸ್ವರೂಪ ಬದಲಾಗಿದೆ. ಅಲ್ಲಿಯವರೆಗೆ ಅದನ್ನು ನಿಯಂತ್ರಿಸುವದು ಕಷ್ಟಸಾಧ್ಯವಾಗಿತ್ತು. ಜನಗಳು ತಮ್ಮ ಸ್ವಂತಕ್ಕೆ ಬೇಕೆಂದರೆ ಬಳಸಬಹುದಿತ್ತು. ಆದರೆ ಮುಖ್ಯವಾಗಿ ಕಾರ್ಪೊರೇಟ್ ಉದ್ಯಮಿಗಳು ಮತ್ತು ಜಾಹಿರಾತು ಮಾಲೀಕರು ಇಂಟರ್‌ನೆಟ್‌ ಅನ್ನು ನಿಯಂತ್ರಿಸುವ ಪ್ರಯತ್ನವನ್ನು ಮಾಡುತ್ತಿದ್ದರು. ಅಂದರೆ, ಇದನ್ನು ಹೆಚ್ಚಾಗಿ ಜಾಹಿರಾತು, ವಾಣಿಜ್ಯ, ಮನೋರಂಜನೆ ಮತ್ತು ಮುಂತಾದವುಗಳಿಗೆ ಬಳಸುತ್ತಿದ್ದರು. ಆದ್ದರಿಂದಲೇ, ಮಾಹಿತಿ ಉಪಯೋಗ, ರಾಜಕೀಯ ಸಂಘಟನೆ ಮತ್ತು ಇನ್ನಿತರ ಜನಪರ ಚಟವಟಿಕೆಗಳಿಗೆ ಬಳಸಿಕೊಳ್ಳಲಕ್ಕೆ ಕಷ್ಟಕರವಾಗಿತ್ತು. ಈಗಲೂ ಇದು ನಿರೀಕ್ಷಿತ ಮಟ್ಟಕ್ಕೆ ಸಾಧ್ಯವಾಗಿಲ್ಲವಾದರೂ, ನಿಜವಾಗಲೂ ಇದೊಂದು ಅಗಾಧವಾದ ಹೋರಾಟವಾಗಿದೆ. ಆದರೆ, ಸ್ವಲ್ಪಮಟ್ಟಿಗೆ ಮೊದಲಿನ ದಿನಪತ್ರಿಕೆ ನಂತರದ ರೇಡಿಯೋ ಹಾಗೂ ಈಗೀನ ದೂರದರ್ಶನದಂತೆ ಇಂಟರ್‌ನೆಟ್ ಕೂಡಾ ಸಹಾಯವಾಗಿದೆಂದು ಹೇಳಲಡ್ಡಿಯಿಲ್ಲ.

ಡೇವಿಡ್: ರಾಜಕೀಯವಾಗಿ ಇಂಟರ್ ನೆಟ್ ಯಾವ ಬಗೆಯ ಪಲ್ಲಟಗಳನ್ನು ಸೃಷ್ಟಿಸಿದೆ ಅಂತ ಅನಿಸುತ್ತೆ ನಿಮಗೆ? ಮಾನವ ಹಕ್ಕು ಮತ್ತು ಪ್ರಜಾಪ್ರಭುತ್ವದ ಬೆಳವಣಿಗೆ/ಏಳ್ಗೆಗಾಗಿ ಇದೊಂದು ಮಾನದಂಡವಾಗಿ ಪರಿಗಣಿಸುತ್ತಿರಾ?

ಚೋಮ್‌ಸ್ಕಿ
: ಇಂಟರ್‌ನೆಟ್‌ನ ಆಗಮನವೇ ಒಂದು ದೊಡ್ಡ ಪ್ರಭಾವವನ್ನು ಸೃಷ್ಟಿಸಿತು. ಹಾಗಾಗಿ, ಕಳೆದ ಹತ್ತು ವರ್ಷಗಳಿಂದ ನಡೆದ ರಾಜಕೀಯ ಅಥವಾ ಸಾಮಾಜಿಕ ಸಂಘಟನಾತ್ಮಕ ಮತ್ತು ಕ್ರೀಯಾತ್ಮಕ ಚಟವಟಿಕೆಗಳು ಇಂಟರ್‌ನೆಟ್‌ ಅನ್ನು ಆಧರಿಸಿಕೊಂಡು ರೂಪಗೊಂಡಿವೆ. ನಿಜ ಇದರ ಫಲವಾಗಿ ಇಂಡೋನೆಷಿಯಾದೊಳಗಿದ್ದ ಸರ್ವಾಧಿಕಾರತ್ವವನ್ನು ನಿರ್ಮೂಲನಗೊಳಿಸಲಕ್ಕೆ ಇಂಟರ್‌ನೆಟ್ ಜನಗಳ ಮಧ್ಯೆ ಸಂಪರ್ಕ ಕಲ್ಪಿಸಲು ಬಹಳ ಅನಕೂಲಕರವಾಗಿರುವುದನ್ನು ಗಮನಿಸಬಹುದು. ಹೆಚ್ಚಿನ ವಿದ್ಯಾರ್ಥಿಗಳಿಗೆ ಸಂಘಟನೆಗೊಂಡು ಈ ಸರ್ವಾಧಿಕಾರತ್ವವನ್ನು ಉಚ್ಛಾಟಿಸಲು ಸಾಧ್ಯವಾದದ್ದು ಇದರಿಂದಲೇ. ಈಗಲೂ ಇಂಟರ್‌ನೆಟ್ ದಕ್ಷಿಣಕೊರಿಯಾದಲ್ಲಿ ಬಹಳ ಪ್ರಜಾಸತ್ತಾತ್ಮಕವಾಗಿ ರೂಪಗೊಂಡಿರುವದನ್ನು ಗಮನಿಸಿದ್ದೇವೆ.

ಪ್ರತಿ ಬಂಡವಾಳಶಾಹಿಯ ಉದ್ದೇಶವು ಸಮಾಜದ ಮೂಲಧಾತು ಮಾಧ್ಯಮವನ್ನು ಕೇಂದ್ರಿಕರಿಸಿಕೊಂಡು ತಮ್ಮ ವ್ಯವಹಾರವನ್ನು ಸುಲಭವಾಗಿ ಈಡೇರಿಸಿಕೊಳ್ಳುವದೇ ಆಗಿದೆ. ಆದರೆ ಪ್ರಪಂಚದಲ್ಲಿಯೇ ದಕ್ಷಿಣಕೊರಿಯಾವು ಬಹಳ ನರವ್ಸ್ ಆದ ದೇಶವಾಗಿತ್ತು. ಆದರೆ, ನಂತರದ ದಿನಗಳಲ್ಲಿ ಇಂಟರ್‌ನೆಟ್‌ನ ಮೂಲಕ ಮತ್ತು ಇಂಟರ್‌ನೆಟ್‌ ಅನ್ನು ಒಂದು ಬೃಹತ್/ಸ್ವತಂತ್ರ ಮಾಧ್ಯಮ ವ್ಯವಸ್ಥೆಗೆ ಪರ್ಯಾಯವಾಗಿ ರೂಪಿಸಿಕೊಳ್ಳಲು ಸಾಧ್ಯವಾಗಿದೆ ಅಂತ ಅನಿಸುತ್ತದೆ. ಹಾಗೂ ಇದೇ ಅವರ ಇವತ್ತಿನ ರಾಜಕೀಯ ಜಯಕ್ಕೆ ಮತ್ತು ಒಬ್ಬ ಸುಧಾರಣಾವಾದಿ ಅಧ್ಯಕ್ಷರ ಆಯ್ಕೆಗೆ ಮುಖ್ಯ ಕಾರಣ ಎಂದೂ ಹೇಳಬಹುದು. ಈ ಪ್ರಸ್ತುತ ಸರಕಾರಕ್ಕೆ ಸಾಕಷ್ಟು ಜನ ಬೆಂಬಲ ದಕ್ಕಲಿಕ್ಕೂ ಇಂಟರ್‌ನೆಟ್ಟೇ ಕಾರಣ. ಇದೆಲ್ಲವನ್ನು ಇಂಟರ್‌ನೆಟ್-ಮಾಧ್ಯಮದಿಂದ ಮಾಡಲಿಕ್ಕೆ ಸಾಧ್ಯವಾಗಿದೆ ಎಂದೇ ಹೇಳಬೇಕು.

ಹೌದು, ಇಂಟರ್‌ನೆಟ್‌ನಿಂದ ಇದೆಲ್ಲಾ ಸಾಮಾನ್ಯವಾಗಿದೆ. ಆದ್ದರಿಂದಲೇ ಅಂತರಾಷ್ಟ್ರೀಯ ಸಂಘಟನೆಯು ದಿಗ್ಭಂಧಗೊಳಿಸಿದ್ದ ಬಹುಪಕ್ಷೀಯ ಒಪ್ಪಂದದ ಹೂಡಿಕೆಯನ್ನು ಇಂಟರ್‌ನೆಟ್‌ನ ಸಹಾಯದಿಂದ ಇದನ್ನು ಸಂಪೂರ್ಣವಾಗಿ ಸಾಬೀತಪಡಿಸಿಲಾಗಿದೆ. ಮೂಲಭೂತವಾಗಿ, ಮಾಧ್ಯಮಕ್ಕೆ ಇದೆಲ್ಲಾ ಸಾಧ್ಯವೇ ಇಲ್ಲ ನೋಡಿ. ಇವತ್ತು ಜಾಗತಿಕ ಸಾಮಾಜಿಕ ವೇದಿಕೆ [ವರ್ಲ್ಡ್ ಸೋಸಿಯಲ್ ಫೋರಮ್] ಇಷ್ಟೊಂದು ಬೃಹತ್ ಸಂಘಟನೆಯಾಗಿ ರೂಪಗೊಳ್ಳಲು, ಅದರ ಸಭೆಗಳಿಗೆ ಸಾವಿರಾರು ಜನ ಸೇರಲು ಹಾಗೂ ಜಗತ್ತಿನ ಪ್ರತಿ ಮೂಲೆಯಿಂದಲೂ ಜನ ಇದರಲ್ಲಿ ಪಾಲ್ಗೊಳ್ಳಲು ಸಾಧ್ಯವಾದದ್ದೂ ಇಂಟರ್‌ನೆಟ್‌ನ ಸಂಘಟನೆಯಿಂದಲೇ ಎಂದೂ ಹೇಳಬೇಕು. ಆದರೆ, ಮಾಸ್ ಮೀಡಿಯಾವು ಇಷ್ಟೆಲ್ಲಾ ಅವಕಾಶಗಳನ್ನು ಇಂತಹ ಸಂಘಟನೆಗಳಿಗೆ ಯಾವತ್ತೂ ಕೊಡಲಾರದು. ಇಂತಹ ಸಾಕಷ್ಟು ಉದಾಹರಣೆಗಳನ್ನು ಉಲ್ಲೇಖಿಸಬಹುದು.

ಡೇವಿಡ್: ನಮ್ಮ ಜನಾಂಗ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕನ್ನು ಕುರಿತು ಪ್ರಗತಿ ಸಾಧಿಸಿದೆ ಎಂದು ನಿಮಗೇನಾದರೂ ಅನ್ನಿಸಿದೆಯೇ?

ಚೋಮ್‌ಸ್ಕಿ
: ಹೌದು ಇದರಿಂದ ಪ್ರಗತಿಯೂ ಅಗಿದೆ ಹಾಗೂ ವೈಪಲ್ಯವೂ ಇದೆ. ಆದರೆ ಇದರ ಬೇರುಗಳನ್ನು ಪತ್ತೆ ಹಚ್ಚುವುದು ಬಹಳ ಕಷ್ಟದ ಕೆಲಸ. ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಗಮನಾರ್ಹ ಪ್ರಗತಿ ಆಗಿದೆ ಎಂದು ಹೇಳಬಹುದು. ಆದರೆ ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದಂತೆ ಹೇಳುವದೆಂದರೆ ಇದು ಬಹಳ ಜಟಿಲವಾದದ್ದು. ಔಪಚಾರಿಕ ರೀತಿಯಲ್ಲಿ ಪ್ರಜಾಪ್ರಭುತ್ವ ಬೆಳದಿದೆ ಎಂದು ಹೇಳಲಡ್ಡಿಯಿಲ್ಲ. ಇದರರ್ಥ ಪ್ರಜಾಪ್ರಭುತ್ವ ಎಂದರೆ ಮತ ಚಲಾಯಿಸುವ ಶಕ್ಕಿಯನ್ನು ಪಡಕೊಂಡಿದ್ದನ್ನೆ ಪ್ರಜಾಪ್ರಭುತ್ವದ ಬೆಳವಣಿಗೆ ಎನ್ನಬಹುದು. ಇದು ಮಾತ್ರವಲ್ಲದೆ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಪರಿಣಾಮಕಾರಿಯಾಗಿ ಚಲಾಯಿಸುವುದಕ್ಕೆ ಅಡ್ಡಿ-ಆತಂಕಗಳೂ ಬೆಳದಿವೆ. ಈ ಕಾರಣಗಳಿಂದಲೇ ಜಗತ್ತಿನಾದ್ಯಂತ ಪ್ರಜಾಪ್ರಭುತ್ವವ ಕುರಿತ ಸಾಕಷ್ಟು ಗುಮಾನಿ, ನಿರಾಸೆಗಳು ಮತ್ತು ಸಿನಿಕತನ ಬೆಳದಿದೆ. ಇದಕ್ಕೆ ಅಮೆರಿಕಾವೇನು ಹೊರತಾಗಿಲ್ಲ.

ಅಂದರೆ, ಅಮೆರಿಕಾದ ಸಮಾಜಗಳು ಬಹಳ ಮುಕ್ತ ಮತ್ತು ಪ್ರಜಾಸತ್ತಾತ್ಮಕವೆಂದು ಬೀಗುವ ದೇಶದಲ್ಲಿಯೇ ಈ ದೇಶದ ಒಟ್ಟು ಜನರ ಮುಕ್ಕಾಲು ಭಾಗ ಜನ ಶ್ರೀಮಂತರು ಮತ್ತು ಔದ್ಯೋಗಿಕ ವಲಯದ ಜನರೊಡ್ಡುವ ಆಮಿಷಕ್ಕೆ ಈ ದೇಶದ ಅಧ್ಯಕ್ಷೀಯ ಚುನಾವಣೆಯು ಸಾಮಾನ್ಯವಾಗಿ ಒಂದು ನಕಲಿ ಆಟದಂತೆ ಹಾಗೂ ಚುನಾವಣಾ ಅಭ್ಯರ್ಥಿಗಳು ಕೂಡ ಈ ಶ್ರೀಮಂತ ಮತ್ತು ಬಂಡವಾಳಶಾಹಿಗಳ ನಿರ್ದೇಶನದಂತೆ ತಮಗೆ ತಿಳಿಯದ ಮತ್ತು ಹೊಳೆಯದನ್ನು ಹೇಳುತ್ತಾರೆ. ಈಗ ಈ ಜನಗಳ ಸಂಖ್ಯೆಯೇ ಹೆಚ್ಚುತ್ತಿದೆ. ಈ ಯಥಾಸ್ಥಿತಿ ಲ್ಯಾಟಿನ್ ಅಮೆರಿಕಾ ಮತ್ತು ಜಗತ್ತಿನ ಉದ್ದ ಅಗಲಕ್ಕೂ ನಡೀತಾ ಇದೆ. ಆದ್ದರಿಂದ, ಒಂದು ಔಪಚಾರಿಕ ಪ್ರಜಾಪ್ರಭುತ್ವ ಖಂಡಿತಾ ಬೆಳೆಯುತ್ತಿದೆ ಎನ್ನಬಹುದು. ಆದರೆ, ನಿಜವಾದ ಪ್ರಜಾಪ್ರಭುತ್ವ ಬೆಳೆಯುತ್ತಿದೆ ಎಂದು ಸಾರ ಸಗಟಾಗಿ ಹೇಳಲಿಕ್ಕೆ ನನಗೆ ಸಾಧ್ಯವಿಲ್ಲ.

ಡೇವಿಡ್:
ಅಮೆರಿಕಾ ಮತ್ತು ಜಗತ್ತಿನ ಇತರ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವದ ಹಿರಿಮೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಏನು ಮಾಡಬೇಕಂತ ತಮಗೆ ಅನಿಸುತ್ತೇ?

ಚೋಮ್‌ಸ್ಕಿ: ೨೦ನೇ ಶತಮಾನದ ಅಮೆರಿಕಾದ ಖ್ಯಾತ ಸಾಮಾಜಿಕ ತತ್ವಜ್ಞಾನಿ ಜಾನ್ ದೇವಯ್‌ ರವರು ಸರಿಯಾಗಿ ಗುರುತಿಸಿದಂತೆ ರಾಜಕಾರಣವು ಬಂಡವಾಳಶಾಹಿಗಳು ಆಡಿಸುವ ಗೊಂಬೆಯಾಟದಂತೆ. ಇದರರ್ಥ ಎಲ್ಲಿಯವರೆಗೆ ನಾವು ಖಾಸಗಿ ಅಧಿಕಾರ ಮತ್ತು ಸಂಪತ್ತಿಗೆ ಅತಿಯಾದ ಪ್ರಾಮುಖ್ಯತೆ ನೀಡುತ್ತಿವೋ ಅಲ್ಲಿಯವರೆಗೆ ನಮ್ಮ ಆರ್ಥಿಕತೆಯಲ್ಲಿ ನಿರಂಕುಶ ವ್ಯವಸ್ಥೆ ಇದ್ದೆಇರುತ್ತೆ. ಒಟ್ಟಿನಲ್ಲಿ ಬಿಸನೆಸ್ ವಲಯವು ಬುಡದಿಂದ ಮೇಲಿನವರೆಗೂ ಸರ್ವಾಧಿಕಾರಿ ಅನುಕ್ರಮದಲ್ಲಿರುತ್ತೆ. ಈ ಮನೋಧರ್ಮ ಮುಂದುವರಿದಷ್ಟು ಪ್ರಜಾಪ್ರಭುತ್ವ ಕ್ಷೀಣಿಸುತ್ತಲೇ ಇರುತ್ತೆ. ಪ್ರಜಾಸತ್ತಾತ್ಮಕ ಬೆಳವಣಿಗೆಯಿಂದಲೇ ಇಂತಹ ಬಂಡವಾಳಶಾಹಿಗಳ ಅಧಿಕಾರ ಮತ್ತು ಸಂಪತ್ತಿನ ಕಪಿಮುಷ್ಠಿಯಿಂದ ಹೊರಬರಲು ಸಾಧ್ಯ. ಹಾಗೂ ಎಲ್ಲ ಸಂಸ್ಥೆಗಳನ್ನು ಪ್ರಜಾಸತ್ತಾತ್ಮಕ ರೀತಿ-ರಿವಾಜುಗಳಿಂದ ರೂಪಿಸಲು ಅನುವಾಗುತ್ತೆ. ಇದನ್ನೆ ಜಾನ್ ದೇವಯ್‌ ರವರು ಇಂಡಸ್ಟ್ರಿಯಲ್ ಫ್ಯೂಡಲಿಸಮ್‌ನಿಂದ ಇಂಡಸ್ಟ್ರಿಯಲ್ ಡೆಮಾಕ್ರೆಸಿ ಎಂದೂ ಬಣ್ಣಿಸಿದ್ದಾರೆ. ಇದು ಕೇವಲ ಇಂಡಸ್ಟ್ರಿಗೆ ಮಾತ್ರ ಅನ್ವಯಿಸಿದೆ ಅಂತಲ್ಲ ಎಲ್ಲ ಸಂಸ್ಥೆಗಳಿಗೆ ಅನ್ವಯಿಸುವಂತಹದು. ಇದು ಸಾಂಪ್ರದಾಯಕ ದೃಷ್ಟಿಕೋನವಾದರೂ ನನಗೂ ಇದೆ ಸರಿ ಅನಸುತ್ತೆ.

ಡೇವಿಡ್:
ಜಾಗತಿಕ ವ್ಯಾಕರಣವು [ಯುನಿವರ್ಸಲ್ ಗ್ರಾಮರ್] ಜನಗಳಲ್ಲಿ ಅಂತರ್ಗತ ಆಗಿರುವ ಹಾಗೆ ಜಾಗತಿಕ ನೈತಿಕತೆ ಅನ್ನುವುದೇನಾದರೂ ಇದಿಯೇ? ಇದಕ್ಕೆ ನಿಮ್ಮ ಭಾಷಾಶಾಸ್ತ್ರದ ತಿಳುವಳಿಕೆಯಿಂದ ಏನಾದರೂ ಸಹಾಯವಾಗಿದಿಯೇ?

ಚೋಮ್‌ಸ್ಕಿ: ನಿಜ, ನನ್ನ ಭಾಷಾಶಾಸ್ತ್ರದ ತಿಳುವಳಿಕೆ ಇದಕ್ಕೇನು ಅಂತಹ ಸಹಾಯ ಮಾಡಿಲ್ಲ. ಆದರೆ ಇದು ಸರಿ ಅನ್ನಿಸುತ್ತೆ. ಯಾಕೆಂದರೆ ಈ ತಿಳುವಳಿಕೆ ಆಧುನಿಕ ಭಾಷಾಶಾಸ್ತ್ರ ಹೊರಹೊಮ್ಮವ ಮೊದಲೇ ಸಾಕಾರಗೊಂಡಿತ್ತು. ಇದನ್ನು ಹದಿನೆಂಟನೇ ಶತಮಾನದ ಬ್ರಿಟಿಷ್ ತತ್ವಜ್ಞಾನಿ ಡೇವಿಡ್ ಹ್ಯೂಮ್ ಸರಿಯಾಗಿ ಗುರುತಿಸಿರುವಂತೆ - ಕರ್ತವ್ಯದ ಸಂಖ್ಯೆ ಅಪರಿಮಿತವಾಗಿದೆ. ಅಂದರೆ, ಇವುಗಳಲ್ಲಿ ಹೆಚ್ಚಿನವು ಹೊಸ ಬಗೆಯ ಕರ್ತವ್ಯಗಳಾಗಿರುತ್ತವೆ. ಇಂತಹ ಅಪಾರ ಸಂದರ್ಭಗಳಲ್ಲಿ ನಾವೇನೂ ಮಾಡಬೇಕು ಎನ್ನುವ ತಿಳುವಳಿಕೆ ಇದ್ದೆಇರುತ್ತೆ. ಇದು ಯಾವಾಗ ಸಾಧ್ಯವೆಂದರೆ ಮನುಷ್ಯನ ಸ್ವಭಾವ ಕೆಲವು ನಿಶ್ಚಿತ ತತ್ವಗಳನ್ನು ಆಧರಿಸಿಕೊಂಡಿದ್ದರೆ ಇದರಿಂದ ಸಾಧಿತಗೊಳ್ಳುವ ತಿಳುವಳಿಕೆ ನಮ್ಮ ನೈತಿಕ ಜವಾಬ್ದಾರಿಗಳನ್ನು ಗುರುತಿಸುತ್ತೆ ಅಂತ ಹ್ಯೂಮ್ ಹೇಳುತ್ತಾನೆ. ಇದು ಸಹಜವಾಗಿಯೇ ನಮಗೆ ಕೊಡಮಾಡಲ್ಪಟ್ಟಿದೆ. ಹ್ಯೂಮ್ ಇದನ್ನು ಹದಿನೆಂಟನೇ ಶತಮಾನದಲ್ಲಿ ಹೇಳಿದಂತೆby "the original hand of nature." ಇದು ನಮ್ಮ ಸ್ವಭಾವಕ್ಕೆ ಪೂರಕವಾಗಿ ವಿಕಾಸ ಹೊಂದಿದೆ ಎಂದು ಹೇಳಬಹುದು.

ಅಲ್ಲಿ ಬೇರೆ ಸಾಧ್ಯತೆಗಳೇನಿವೆ ಎಂದು ಗುರುತಿಸುವುದೇ ಕಷ್ಟಸಾಧ್ಯ. ಹಾಗಾಗಿ ಇದು ಕೂಡಾ ಭಾಷಿಕ ಜ್ಞಾನದ ಬೆಳವಣೆಗೆ ಹೇಗಾಗುತ್ತೆ ಅನ್ನವಷ್ಟೆ ಮುಖ್ಯವಾದ ತಿಳವಳಿಕೆಯಾಗಿದೆ. ಇದು ಅಪಾರ ಸಂದರ್ಭಗಳಲ್ಲಿ ನಮಗೆ ದಕ್ಕುತ್ತೆ. ಹಾಗಾಗಿ ಇದು ನಮ್ಮ ಸ್ವಭಾವದ ಭಾಗವೇ ಆಗಿರಬೇಕು.

ಉದಾಹರಣೆಗಾಗಿ, ಈಗ ನೀವು ಮತ್ತು ನಾನು ವ್ಯಕ್ತಪಡಿಸುವ ಎಷ್ಟೋ ಅಭಿಪ್ರಾಯಗಳು ನಮ್ಮ ಜೀವಮಾನದಲ್ಲಿಯೇ ಕೇಳರಿಯದವಾಗಿವೆ ಅಥವಾ ಅದಕ್ಕೂ ಮುಂಚೆ ಯಾರು ಕೂಡ ಅವುಗಳನ್ನು ಉದ್ಧರಿಸದೇ ಇದ್ದಿರಬಹುದು. ಆದಾಗ್ಯೂ ಈ ಅಭಿಪ್ರಾಯಗಳನ್ನು ಅರ್ಥೈಸಿಕೊಳ್ಳುತ್ತೇವೆ. ಯಾಕಂದರೆ, ನಮ್ಮ ಮನಸ್ಸು ಇಂತಹ ಅಪರಿಮಿತ ಅನುಭವಗಳನ್ನು ಅರ್ಥೈಸುವ ಮತ್ತು ವ್ಯಾಖ್ಯಾನಿಸುವ ನಿಗದಿತ ಅಂತರ್ಗತ ತಂತ್ರವನ್ನೊಳಗೊಂಡಿರುತ್ತೆ. ಹಾಗಾಗಿ ಜಾಗತಿಕ ವ್ಯಾಕರಣವು ಜನಗಳಲ್ಲಿ ಅಂತರ್ಗತ ಆಗಿರುವ ಹಾಗೆ ಜಾಗತಿಕ ನೈತಿಕತೆ ಇರುತ್ತೆ ಎಂದು ಹೇಳಬಹುದು. ನಮಗೆ ಭಾಷೆಯನ್ನು ಕುರಿತು ಏನಾದರೂ ಗೊತ್ತಿದೆಯೋ? ಇಲ್ಲವೋ? ಆದರೆ, ಹ್ಯೂಮ್‌ನ ತಿಳುವಳಿಕೆಗಳೇ ಸರಿ ಅನಿಸುತ್ತವೆ.

ಡೇವಿಡ್
: ಅಂತರ್ಗತವಾದ ನಮ್ಮ ಮನಸ್ಸಿನ ವಿನ್ಯಾಸಗಳು ಅದೇಗೆ ನಮ್ಮ ತಿಳುವಳಿಕೆಗೆ ಮಿತಿಗಳನ್ನು ವಿಧಿಸುತ್ತೆ ಅಂತ ನಿಮಗೆ ಅನಿಸುತ್ತೆ?

ಚೋಮ್‌ಸ್ಕಿ
: ಹೌದು, ಒಂದು ಪಕ್ಷ ನಾವೇನಾದರೂ ದೈವ ಮಾನವರಲ್ಲದೆ, ಸಾವಯವ ಜೀವಿಗಳಾಗಿದ್ದೇ ನಿಜವಾದರೆ ನಮ್ಮ ಅಂತರ್ಗತ ಲಕ್ಷಣಗಳು ನಮ್ಮ ವಿಕಾಸಕ್ಕೆ ಅವಕಾಶವನ್ನು ಒದಗಿಸುವದರ ಜೊತೆಗೆ ಮಿತಿಗಳನ್ನು ಒಡ್ಡುತ್ತವೆ. ವಾಸ್ತವ ಏನಂದರೆ ನಾನು ಮನುಷ್ಯ ಜೀವಿಯಾಗುವುದಕ್ಕೆ ಮನುಷ್ಯ ಜೀನ್ಸ್‌ಗಳೇ ಕಾರಣ ಬದಲಾಗಿ ಇಲಿಯ ಜೀನ್ಸ್‌ಗಳು ಅಲ್ಲ. ಹಾಗಾಗಿ ನಾನು ಇಲಿಯಾಗಲಿಕ್ಕೆ ಸಾಧ್ಯವಿಲ್ಲ. ಇದು ನಮ್ಮ ಗ್ರಹಿಕಾ ಸಾಮರ್ಥ್ಯಗಳಿಗೂ ಅನ್ವಯಿಸುತ್ತೆ. ಆದ್ದರಿಂದ, ನಮ್ಮ ಗ್ರಹಿಕಾ ಸಾಮರ್ಥ್ಯಗಳಿಗೆ ಯಾವುದೇ ಆನುವಂಶಿಕ ಆಧಾರಗಳಿದ್ದರೂ, ಅದು ನಮ್ಮ ಗ್ರಹಿಕಾ ವಿಕಾಸಕ್ಕೆ ಅಗತ್ಯವಿರುವ ಎಲ್ಲ ಆಯ್ಕೆಗಳನ್ನು ಸುಸೂತ್ರವಾಗಿ ಒದಗಿಸುತ್ತೆ. ಹಾಗೇನೆ ಈ ಆಯ್ಕೆಗಳಿಗೆ ಮಿತಿಗಳನ್ನು ಒಡ್ಡುತ್ತೆ ಅನ್ನುವದು ದಿಟ. ಹಾಗಾಗಿ, ನಮಗೇನಾದರೂ ಗ್ರಹಿಕಾ ಸಾಮರ್ಥ್ಯದ ಸಾಧ್ಯತೆಗಳು ಮತ್ತು ಮಿತಿಗಳು ಇದ್ದಿದ್ದೆ ಆದರೆ ಅವುಗಳು ತಾರ್ಕಿಕವಾಗಿ ಸಂಪರ್ಕಗೊಂಡಿರುತ್ತವೆ. ಅಂದರೆ ಇವುಗಳು ನಮ್ಮ ದೈಹಿಕ ಸಾಮರ್ಥ್ಯದಷ್ಟೇ ಸಹಜವಾಗಿರುತ್ತವೆ.

ಡೇವಿಡ್: ಅದೇಗೆ ನಿಮಗೆ ಭಾಷೆ ನಮ್ಮ ಪ್ರಜ್ಞೆಯ ಮೇಲೆ ಪರಿಣಾಮ ಬೀರುತ್ತೆ ಅಂತ ಅನ್ನಿಸುತ್ತೆ ಮತ್ತು ಯಾವುದನ್ನು ನಾವು ವಾಸ್ತವವಾಗಿ ಪರಿಭಾವಿಸುತ್ತೇವೆ.?

ಚೋಮ್‌ಸ್ಕಿ:
ಎಲ್ಲರು ಊಹಿಸುವ ಹಾಗೆ ನೀವೂ ಊಹಿಸಿದ್ದಿರಿ. ಅಂದರೆ, ನಮಗೆ ಗೊತ್ತಿರುವುದೆಲ್ಲ ಅದು ಹೆಚ್ಚು ಕಡಿಮೆ ನಮ್ಮ ಕಲ್ಪಿತ ಭಾವನೆ. ನೀವು ಗಮನವಿಟ್ಟು ಯೋಚಿಸಿ, ಈ ಮುಂದಿನ ಕೆಲವು ಗಂಟೆಗಳಲ್ಲಿ ನೀವು ಕಂಡುಕೊಳ್ಳಬಹುದಾದ ಸಂಗತಿಯೆನೆಂದು. ನಿರಂತರವಾಗಿ ನಿಮ್ಮಷ್ಟಕ್ಕೆ ನೀವು ಮಾತಾಡಿಕೊಳ್ಳುವದು ವೇಧ್ಯವಾಗುತ್ತೆ. ನಾವು ಒಂದು ಕ್ಷಣ ಕೂಡ ನಮ್ಮ ಆಂತರಿಕ ಸಂವಾದದಿಂದ ಮುಕ್ತವಾಗಿರೋಕೆ ಸಾಧ್ಯನೇ ಇಲ್ಲ. ಇದು ನಮ್ಮ ಪ್ರಜ್ಞೆಯ ಅಗಾಧತೆಯ ಭಾಗವಾಗಿರುತ್ತೆ. ಇದೆಲ್ಲವೂ ಒಂದು ಭಾಷೆಯ ಭಾಗವಾಗಿ ನಮ್ಮ ಪ್ರಜ್ಞೆಗೆ ದಕ್ಕುತ್ತೆ. ಇದು ಹೇಗೆ ನಮ್ಮ ಚಿಂತನೆ ಹಾಗೂ ಸಾಮಾನ್ಯ ತಿಳುವಳಿಕೆಯ ಮೇಲೆ ಪ್ರಭಾವ ಬೀರಬಲ್ಲದು ಎನ್ನುವುದನ್ನು ವಿವರಿಸುವದು ಕಷ್ಟ ಸಾಧ್ಯ. ಯಾಕಂದರೆ, ಚಿಂತನೆಯನ್ನು ಸಂಪರ್ಕಿಸಲಿಕ್ಕೆ ಭಾಷೆಯನ್ನು ಹೊರತುಪಡಿಸಿ ಬೇರೆ ಯಾವುದೇ ಸಾಧನ ನಮಗೆ ಲಭ್ಯವಿಲ್ಲ. ಹಾಗಾಗಿ ಇಂತಹ ಪ್ರಶ್ನೆಗಳನ್ನು ಕೇಳುವುದು ಕಷ್ಟ.

ಡೇವಿಡ್:
ಅಶಾಬ್ದಿಕ ಅಭಿವ್ಯಕ್ತಿಗಳು ಮತ್ತು ಯಾವುದೇ ಹಾವ-ಭಾವಗಳನ್ನು ಹೊರತುಪಡಸಿ, ಭಾಷೆಯು ಮನುಷ್ಯನ ಅಭಿವ್ಯಕ್ತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸುತ್ತದೆ ಅಂತ ಅನಿಸುತ್ತಾ? ಅಥವಾ ನಮ್ಮ ಸಾಂಪ್ರದಾಯಿಕ ವಿಜ್ಞಾನ ಗುರುತಿಸದ ವಿಶೇಷ ಸಂವಹನ ಕ್ರಮಗಳಾದ ಮೈಂಡ್-ರೀಡಿಂಗ್ (ಟೆಲಿಪತಿಕ್) ನಂತಹ ವೈಜ್ಞಾನಿಕ ಮಾದರಿಯ ಪಾತ್ರದ ಬಗ್ಗೆ ಅಥವಾ ಅಂತಹದೇ ಬೇರೆ ಯಾವುದಾದರೂ ಸಂವಹನ ಕ್ರಮಗಳನ್ನು ನೀವೇನಾದರೂ ಯೋಚಿಸಿದ್ದಿರಾ?

ಚೋಮ್‌ಸ್ಕಿ: ಮೂದಲನೆಯದಾಗಿ, ಭಾಷೆ ಖಂಡಿತವಾಗಿ ಸಂವಹನವನ್ನು ಸಂಪೂರ್ಣವಾಗಿ ನಿಭಾಯಿಸಲಾರದು. ಆದರೆ ನಾವು ಹಲವು ಬಗೆಗಳಲ್ಲಿ ಸಂವಹನವನ್ನು ನಿಭಾಯಿಸುತ್ತೇವೆ. ಅದು ಸನ್ನೆ ,ಉಡುಗೆ ನಮ್ಮ ಹೇರ್ ಸ್ಟೈಲ್ ಮುಂತಾದವುಗಳ ಮುಖೇನ ಸಂವಹನ ಪ್ರಕ್ರಿಯೆ ನಡೆಯುತ್ತದೆ. ಇವೆಲ್ಲವೂ ಕೂಡಾ ಸಂವಹನ ಕ್ರಿಯೆಗಳು. ಭಾಷೆ ಇವುಗಳಲ್ಲಿ ಒಂದು ಎಂದು ಹೇಳಬಹುದು. ಆದರೆ ಟೆಲಿಪತಿಕ್ ಮಾದರಿಗಳನ್ನು ನಂಬುವ ಅಗತ್ಯವಿಲ್ಲ. ಇವುಗಳು ಅಸ್ತಿತ್ವದಲ್ಲಿಲ್ಲ ಎಂದು ಹೇಳುವದು ನನ್ನ ಉದ್ಧೇಶವಲ್ಲ, ಅದಕ್ಕೆ ಸಾಕಷ್ಟು ಪುರಾವೆಗಳು ಬೇಕು. ಆದರೆ, ಇದು ವಿಚಿತ್ರವಾಗಿ ಕಾಣುತ್ತದೆ. ಯಾಕಂದರೆ ಯಾವುದೇ ವಾಸ್ತವಿಕ ಸಾಧ್ಯತೆಯನ್ನು ಅರ್ಥೈಸುವಲ್ಲಿ ಇದು ಸಫಲವಾಗಿಲ್ಲ. ಇದು ಅಪ್ಪಟ ಸುಳ್ಳು ಎಂದೂ ನಿರೂಪಿಸುವ ಅಗತ್ಯವಿಲ್ಲ. ಆದರೆ ಇದು ಅಸಮಂಜಸವಾದದ್ದು. ಇದರ ನಂಬುಗೆಯಲ್ಲಿ ಸಾಕಷ್ಟು ತೊಡಕುಗಳಿವೆ ಎಂದೇ ಅರ್ಥ.
.
ಡೇವಿಡ್: ದೇವರ ಕಲ್ಪನೆ ಬಗ್ಗೆ ನಿಮ್ಮ ದೃಷ್ಟಿಕೋನ ಏನು? ಹಾಗೂ ನೀವು ಅಲ್ಟಿಮೇಟ್ ಆಗಿ ವಿಕಾಸತ್ವದಲ್ಲಿ ಏನು ಕಾಣುತ್ತಿರಿ?
ಚೋಮ್‌ಸ್ಕಿ: ಇಂತಹ ಯಾವುದೆ ಕಲ್ಪನೆಗಳ ಮೌಲ್ಯವನ್ನು ಪ್ರಶ್ನಿಸುವದಕ್ಕೆ ಕಾರಣಗಳೀವೆ ಎಂದೂ ನನಗೇನೂ ಅನ್ನಿಸ್ತಾಯಿಲ್ಲ.

ಡೇವಿಡ್: ನಿಮಗೆ ವೈಯಕ್ತಿಕವಾಗಿ ಹೇಗೆ ಅನ್ನಿಸುತ್ತೆ ಸಾವಿನ ನಂತರ ಆತ್ಮಕ್ಕೆ ಏನಾಗುತ್ತೆ ಅಂತ?
ಚೋಮ್‌ಸ್ಕಿ: ನನಗೆ ಅನ್ನಿಸುವುದೆನಂದರೆ, ಅಲ್ಲಿಗೆ ಆತ್ಮದ ಕತೆಯೂ ಮುಗಿಯಿತು ಎಂದೂ.

ಡೇವಿಡ್:
ಮುಗಿಯಿತು ಅಂದರೆ ಅದೇ ಕೊನೆ ಅಂತಾನ?
ಚೋಮ್‌ಸ್ಕಿ: ಹೌದು ಅದೇ ಕೊನೆ. ಸಾವು ಅಂದರೆ ಸಜೀವದ ಕೊನೆ ಎಂದೇ ಅರ್ಥ, ಹಾಗೇನೆ ಈ ಜೀವದ ಎಲ್ಲಾ ಸಂಬಂಧಿತ ವ್ಯವಸ್ಥೆಗೆ ಇದು ಅನ್ವಯಿಸುತ್ತದೆ.

ಡೇವಿಡ್: ಮಾನವ ಕುಲಕ್ಕೆ ದೊಡ್ಡ ಅಪಾಯ ಇದೆ ಅಂತ ನಿಮಗೇನಾದರೂ ಅನ್ನಿಸುತ್ತದೆಯಾ? ಇದನ್ನು ತಪ್ಪಿಸುವದರ ಬಗ್ಗೆ ನಿಮ್ಮ ಯೋಚನೆ ಏನು?
ಚೋಮ್‌ಸ್ಕಿ: ಸಂಭವಿಸಬಹುದಾದ ಅತೀ ದೊಡ್ಡ ತಕ್ಷಣದ ಅಪಾಯವೆನಂದರೆ, ನ್ಯೂಕ್ಲಿಯರ್ ಯುದ್ಧ. ನಾವು ಎಷ್ಟೋ ಸಾರಿ ಈ ಪ್ರಾಣಾಂತಿಕ/ಮಾರಕ ನ್ಯೂಕ್ಲಿಯರ್ ಯುದ್ಧದಿಂದ ತಪ್ಪಿಸಿಕೊಂಡದ್ದು ನಿಜವಾಗಿ, ಒಂದು ಪವಾಡವೇ ಸರಿ. ಯಾಕಂದರೆ ಈ ಅಪಾಯಗಳು ದಿನದಿಂದ ದಿನಕ್ಕೆ ಉಲ್ಬಣಿಸುತ್ತವೆ. ಉದಾ; ಸ್ಪೆಸ್‌ನಲ್ಲಿಯ ಮಿಲಿಟರಿಯ ವಿಸ್ತರಣೆ ಮತ್ತು ಬೆಳವಣಿಗೆಯು ಈ ಸ್ಪೆಸ್ ಆಧಾರಿತ ಧ್ವಂಸಕ ಕೃತ್ಯಗಳು, ಮುಟ್ಟಿದರೆ ಸ್ಪೋಟಗೊಳ್ಳಬಹುದಾದ (ಹೇರಿ-ಟ್ರಿಗರ್) ಭಯಾನಕ ಆಯುಧಗಳು ಅಚಾನಕ್ ಯಾವುದೇ ತರಹದ ಅಪಾಯವನ್ನುಂಟು ಮಾಡಬಹುದು.

ಇವುಗಳೇ ಸಧ್ಯದ ಅಪಾಯಗಳು. ಈ ಅಪಾಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಇದು ಇನ್ನಿತರ ಸಮೂಹ ಧ್ವಂಸಕ ಸಂದರ್ಭಕ್ಕೂ ಅನ್ವಯಿಸುತ್ತದೆ. ಕ್ಷಣ ಕ್ಷಣಕ್ಕೂ ನ್ಯೂಕ್ಲಿಯರ್ ಆಯುಧಗಳು ವಿಪರೀತ ವಿಧ್ವಂಸಕವಾಗುತ್ತಿವೆ. ಹಾಗೂ ಜೈವಿಕ-ಆಯುಧಗಳು (ಬೈಯೋ-ವೆಪನ್ಸ್) ಉಗ್ರ ಮಾರಕ ಸ್ವರೂಪದಲ್ಲಿ ರೂಪಗೊಳ್ಳುತ್ತಿವೆ. ಈ ಜೈವಿಕ-ಆಯುಧಗಳ ಕುರಿತ ಒಡಂಬಡಿಕೆಯ ವಿಫಲತೆಯು ಜೀವಸಂಕುಲಕ್ಕೆ ಇನ್ನೂ ಗಂಭೀರವಾದ ಅಪಾಯವನ್ನು ಒಡ್ಡುತ್ತಿವೆ. ವಾಸ್ತವವೇನೆಂದರೆ, ಅಮೆರಿಕಾವು ಈ ಬೈಯೋ-ವೆಪನ್ಸ್‌ನ ಒಪ್ಪಂದವನ್ನು ಅನುಷ್ಠಾನಗೊಳಿಸಲಿಕ್ಕೆ ಮೀನಾ ಮೇಷ ಎನಸುತ್ತದೆ. ನಿಜವಾಗಿ ಹೇಳುವುದಾದರೆ, ಇತ್ತೀಚಿನ ಈ ಬೈಯೋ-ವೆಪನ್ಸ್‌ನ ಒಪ್ಪಂದದ ಪ್ರಯತ್ನವನ್ನು ಅಸ್ಥಿರಗೊಳಿಸಲಾಗಿದೆ. ಕಾರಣ ಅಮೆರಿಕಾವು ಹೊಸ ನ್ಯೂಕ್ಲಿಯರ್ ಆಯುಧಗಳ ಸಿದ್ಧತೆ ಮತ್ತು ಸ್ಪೆಸ್ ಮಿಲಿಟರೀಕರಣದ ಮುಂದಾಳುತನದ ಹುಮ್ಮಸ್ಸಿನಲ್ಲಿದೆ.

ಸಧ್ಯಕ್ಕೆ ಇವುಗಳೇ ಭಯಾನಕ ಅಪಾಯಗಳು. ಈ ನಾಶಗಳಿಂದ ನಾವು ಏನಾದರೂ ಗಮನಿಸಿದ್ದರೆ, ಜೀವಸಂಕುಲವು ಇಷ್ಟು ಕಾಲ ಬದುಕಿ-ಉಳಿದಿದ್ದೆ ಆಶ್ಚರ್ಯವೆಂದು ಯಾವ ಪ್ರಜ್ಞಾವಂತರಿಗಾದರೂ ಅನ್ನಿಸುತ್ತದೆ. ಭವಿಷ್ಯದ ಬದುಕಿನಲ್ಲಿ ಯಾವುದೇ ಪ್ರತಿರೋಧಕ್ಕೆ ಅವಕಾಶವೇ ಇಲ್ಲ ಅನ್ನುವದು ವೇಧ್ಯವಾಗುತ್ತೆ. ಇದಕ್ಕಿಂತ ಹೆಚ್ಚಾಗಿ ಇನ್ನೂ ಭಯಾನಕ ಅಪಾಯಗಳು ಕಾದಿವೆ. ಅಂದರೆ, ಯಾರಿಗೂ ಅರ್ಥವಾಗದ ಜೀವಪರಿಸರದ ಅಪಾಯಗಳು ಇರುವುದು ಶೋಚನಿಯ. ಆದರೆ, ವಿಜ್ಞಾನಿಗಳ ನಡುವಿನ ಒಟ್ಟಭಿಪ್ರಾಯ ಅವರು ಈ ಕುರಿತು ತುಂಬಾ ಗಂಭೀರವಾಗಿ ಚಿಂತನೆ ನಡಸುತ್ತವೆ ಎಂದು. ಈ ಅಸಮಾನಂತರ (ನಾನ್‌ಲೀನಿಯರ್) ಪ್ರಕ್ರಿಯೆಯಲ್ಲಿ ಈ ಬದಲಾವಣೆಗಳು ಆಗುತ್ತಿವೆ. ಅಂದರೆ, ಸಣ್ಣ-ಪುಟ್ಟ ವ್ಯತ್ಯಾಸಗಳು, ಬದಲಾವಣೆಗಳು ಭಾರೀ ಅನಾಹುತವನ್ನು ಮಾಡುತ್ತವೆ. ಇಂತಹ ಯಾವುದೇ ಮುನ್ಸೂಚನೆಯ ಸುಳಿವು ಇಲ್ಲದ ಪರಿಣಾಮಗಳು ಮತ್ತು ಮಾರಕ ಅಪಾಯಗಳ ಸಾಧ್ಯತೆಗಳು ಘಟಿಸಬಹುದು. ಒಟ್ಟಿನಲ್ಲಿ ಜೀವಸಂಕುಲವು ಅಪಾಯದ ಸ್ಥಿತಿಯಲ್ಲಿದೆ. ಪ್ರಜ್ಞಾವಂತರಿಗೂ ಈ ಜೀವಸಂಕುಲದ ಉಳಿವಿಗಾಗಿ ಪ್ರತಿರೋಧ ಒಡ್ಡುವುದು ಕೂಡಾ ಸಾಧ್ಯವಾಗುತ್ತಿಲ್ಲ.

ಡೇವಿಡ್: ಈ ಮಾನವಕುಲ ಬದುಕಿ ಉಳಿಯುತ್ತದೆಯಾ? ಅಥವಾ ವಿನಾಶದಂಚಿನಲ್ಲಿದೆಯಾ?
ಚೋಮ್‌ಸ್ಕಿ: ಇದು ನಾವು ಹೇಗೆ ನಮ್ಮ ಉದ್ದೇಶ/ವಿಧಿಯನ್ನು ನಿಯಂತ್ರಿಸುತ್ತವೆ ಅನ್ನುವದರ ಮೇಲೆ ನಿರ್ಧಾರ ವಾಗುತ್ತೆ. ನಮಗೆ ಇದನ್ನು ನಿಭಾಯಿಸುವ ಮಾರ್ಗೋಪಾಯಗಳಿವೆ. ಅಂದರೆ, ವಿಧ್ವಂಸಕ ಆಯುಧಗಳನ್ನು ಸ್ಪೇಸ್‌ನಲ್ಲಿಡುವ ಅಥವಾ ಜೀವಪರಿಸರವನ್ನು ಹೈಡ್ರೊಕಾರ್ಬನ್ಸ್‌ನಿಂದ ನಾಶಗೊಳಿಸುವ ಮಾರಕ ಅಪಾಯಗಳಿಗೆ ಅವಕಾಶ ನೀಡುವುದು ಯಾವುದೇ ಕಾನೂನಿನ ಸ್ವರೂಪವಲ್ಲ. ಮತ್ತು ಇವು ಕೇವಲ ಆಯ್ಕೆಗಳು ಮಾತ್ರ.

ಡೇವಿಡ್: ನಿಮಗೆ ಏನು ಭರವಸೆ ಕೊಡುತ್ತೆ?
ಚೋಮ್‌ಸ್ಕಿ: ಸಂಕ್ಷಿಪ್ತವಾಗಿ ಉತ್ತರಿಸುವದಾದರೆ ಇದು ನಿಜವಾಗಿ ಅಂತಹ ಮಹತ್ವದ ಪ್ರಶ್ನೆ ಅಲ್ಲ. ಆದ್ದರಿಂದ, ನಾವು ಎಷ್ಟು ಆಶಾವಾದಿಗಳು ಆಗಿದ್ದೀವಿ ಅಂತ ವೈಯಕ್ತಿಕವಾಗಿ ನಿರ್ಣಯಿಸುವುದು ಅಸಾಧ್ಯತೆಗಳ ಅಪ್ರಸ್ತುತ ಲೆಕ್ಕಾಚಾರವೇ ಸರಿ. ಆದರೆ ನಾವು ಒಂದನ್ನು ಸ್ಪಷ್ಟವಾಗಿ ಗುರುತಿಸುವುದೇನೆಂದರೆ, ಜಗತ್ತಿನಾದ್ಯಂತ ಜನಗಳು ಹಲವಾರು ಬಿಕ್ಕಟ್ಟುಗಳನ್ನು ಮತ್ತು ಸಂಕಷ್ಟಗಳನ್ನು ಅನುಭವಿಸುತ್ತಿರುವ ಸಂದರ್ಭದಲ್ಲಿ, ನಮ್ಮ ವೈಯಕ್ತಿಕ ಅನಿಸಿಕೆ/ಉಹೆಗಳಿಗೆ ಗಮನ ಕೊಡುವುದು ಅಷ್ಟು ಸೂಕ್ತವಲ್ಲ. ಹಾಗಾಗಿ ನಾವು ನಮ್ಮ ಸ್ವಾತಂತ್ರವನ್ನು ಮತ್ತು ಅದರ ಸವಲತ್ತನ್ನು ಅನುಭವಿಸುವ ಸಾಧ್ಯತೆಗಳ ಬಗ್ಗೆ ಯೋಚಿಸುವುದು ಅಗತ್ಯ ಮತ್ತು ಸೂಕ್ತ ಎಂದು ನನ್ನ ಅಭಿಮತ.

ಮೂಲ: ನೋಮ್ ಚೋಮ್‌ಸ್ಕಿ ಜೊತೆ ಡೇವಿಡ್ ಜೆ ಬ್ರೌನ್ ನಡೆಸಿದ ಸಂದರ್ಶನ.
ಕನ್ನಡಕ್ಕೆ: ಮೇಟಿ ಮಲ್ಲಿಕಾರ್ಜುನ
ಪುಟದ ಮೊದಲಿಗೆ

Votes: 3 Rating: 5


ಸರ್, ಕನ್ನಡಕ್ಕೆ ಚೋಮ್ ಸ್ಕಿ ತಂದು ಬಹಳ ಒಳ್ಳೆಯ ಕೆಲಸ ಮಾಡಿದ್ದೀರಿ. ನಿಮ್ಮಿಂದ ಈ ರೀತಿಯ ಅನುವಾದಗಳು ಇನ್ನು ಹೆಚ್ಚೆಚ್ಚು ಬರಲಿ. ದಿನೇಶ್ ಹಾಸನ್...

ಮೇಟಿ, ಒಂದು ಸಲಹೆ. ನಿಮ್ಮ ಕನ್ನಡ ಬರವಣಿಗೆಯನ್ನು ಮೊದಲು ಸುಧಾರಿಸಿ. ಸ್ವಂತ ಲೇಖನಗಳನ್ನು ಬರೆದು ಅಭ್ಯಾಸ ಮಾಡಿ. ನಂತರ ಅನುವಾದಕ್ಕೆ ಇಳಿಯಿರಿ....

ಸಂದರ್ಶನದ ಕೆಟ್ಟ ಅನುವಾದ. ಸಂದರ್ಶನ ಬಹುಷಃ ಒಳ್ಳೆಯದಿದೆ. ಒರಿಜಿನಲ್ ಸಂದರ್ಶನದ ಲಿಂಕ್ ಕೊಡಿ ಮೇಟಿಯವರೆ. -ವರಾಹ...
Re: My intention was to translate Chomsky into Kannada that I did it. I do not know what is “the best translation” may be, it depends, the way you take it. http://www.chomsky.info Language, Politics, and Propaganda -Noam Chomsky interviewed by David Jay Brown
Re: Thank you. Sorry if I have hurt you. But your Kannada is not free flowing. It is difficult to comprehend you in a single read. Please keep writing. - Varaha
Re: No, its o.k. thanks for feedback. meti


chomsky abhiprayagalella eshtu nikharavaagide! naada...

Many people heard about Chomsky but only few understood him better. It is necessary to understand Chomsky as far as Karnataka socio-political crises is concerned. You please translate Chomsky more and more to Kannada....
Re: uttama baraha. praveen mavinsara, your student